ಹೈದರಾಬಾದ್: ವಾಷಿಂಗ್ಟನ್ ಡಿಸಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹೈದರಾಬಾದ್ ಮೂಲದ 26 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ರವಿತೇಜ ಎಂದು ಗುರುತಿಸಲಾಗಿದೆ. ಪೆಟ್ರೋಲ್ ಪಂಪ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಡೆದಿರುವ ಬಗ್ಗೆ ನಾರ್ತ್ ಅಮೆರಿಕನ್ ಅಸೋಸಿಯೇಷನ್ ಆಫ್ ಇಂಡಿಯನ್ ಸ್ಟೂಡೆಂಟ್ಸ್ (ಎನ್ಎಎಐಎಸ್) ದೃಢಪಡಿಸಿದೆ.
ಘಟನೆಯ ಬಗೆಗಿನ ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ. ಘಟನಾ ಸ್ಥಳದ ಬಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದ್ವೇಷ ಅಪರಾಧ ಸೇರಿದಂತೆ ಎಲ್ಲಾ ಕೋನಗಳಿಂದ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹೈದರಾಬಾದಿನ ಚೈತನ್ಯಪುರಿಯ ಗ್ರೀನ್ ಹಿಲ್ಸ್ ಕಾಲೋನಿ ನಿವಾಸಿಯಾಗಿರುವ ರವಿತೇಜ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 2022ರ ಮಾರ್ಚ್ನಲ್ಲಿ ಅಮೆರಿಕಕ್ಕೆ ತೆರಳಿದ್ದರು. ಪ್ರಸ್ತುತ ಅಧ್ಯಯನವನ್ನು ಪೂರ್ಣಗೊಳಿಸಿದ್ದ ಅವರು ಅಮೆರಿಕದಲ್ಲಿ ನೌಕರಿಯ ಹುಡುಕಾಟದಲ್ಲಿದ್ದರು.
ಈ ದುರಂತ ಘಟನೆಯಿಂದ ರವಿ ತೇಜ ಅವರ ಕುಟುಂಬ ತೀವ್ರ ಆಘಾತಕ್ಕೀಡಾಗಿದೆ. ರವಿತೇಜ ಅವರ ತಂದೆ ಕೆ. ಚಂದ್ರಮೌಳಿ ಅವರು ಸಂತೈಸಲಾಗದಷ್ಟು ದುಃಖಿತರಾಗಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಕುಟುಂಬವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ವಿನಂತಿಸಿದೆ.
ನಾಲ್ಕು ತಿಂಗಳಲ್ಲಿ ಎರಡನೇ ಘಟನೆ: ರವಿತೇಜ ಕಳೆದ ನಾಲ್ಕು ತಿಂಗಳಲ್ಲಿ ಅಮೆರಿಕದಲ್ಲಿ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ತೆಲಂಗಾಣದ ಎರಡನೇ ಯುವಕನಾಗಿದ್ದಾರೆ. ಸೆಪ್ಟೆಂಬರ್ 29, 2024 ರಂದು, ತೆಲಂಗಾಣದ ಖಮ್ಮಮ್ ಜಿಲ್ಲೆಯ ಯುವಕನನ್ನು ಆತ ಕೆಲಸ ಮಾಡುತ್ತಿದ್ದ ಗ್ಯಾಸ್ ಸ್ಟೇಷನ್ನಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಸಾಯಿ ತೇಜ ನುಕಾರಪು (22) ಎಂಬ ಯುವಕನ ಮೇಲೆ ಚಿಕಾಗೋ ಬಳಿಯ ಗ್ಯಾಸ್ ಸ್ಟೇಷನ್ ನಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ನುಕಾರಾಪು ಭಾರತದಲ್ಲಿ ಬಿಬಿಎ ಮುಗಿಸಿ ಅಮೆರಿಕದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಮೃತರು ನಾಲ್ಕು ತಿಂಗಳ ಹಿಂದಷ್ಟೇ ಅಮೆರಿಕಕ್ಕೆ ತೆರಳಿದ್ದು, ಅರೆಕಾಲಿಕ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ : ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಸಂತ್ರಸ್ತೆಯ ಪೋಷಕರ ನಿರ್ಧಾರ - RG KAR PARENTS DISMAYED