ಮುಂಬೈ(ಮಹಾರಾಷ್ಟ್ರ): 2006ರಲ್ಲಿ ಮುಂಬೈನಲ್ಲಿ ದರೋಡೆಕೋರ ಛೋಟಾ ರಾಜನ್ ನಿಕಟವರ್ತಿಯಾಗಿದ್ದ ರಾಮನಾರಾಯಣ ಗುಪ್ತಾ ಎಂಬವರ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಮಾಜಿ ಪೊಲೀಸ್ ಪ್ರದೀಪ್ ಶರ್ಮಾ (ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ) ದೋಷಿ ಎಂದು ಘೋಷಿಸಿದ ಬಾಂಬೆ ಹೈಕೋರ್ಟ್, ಜೀವಾವಧಿ ಶಿಕ್ಷೆ ವಿಧಿಸಿತು.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ಪೀಠವು 2013ರ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಶರ್ಮಾ ಅವರನ್ನು ದೋಷಮುಕ್ತಗೊಳಿಸಿದ್ದು ತಪ್ಪು ಮತ್ತು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಶರ್ಮಾ ವಿರುದ್ಧ ಲಭ್ಯವಿರುವ ಮಹತ್ವದ ಸಾಕ್ಷ್ಯವನ್ನು ಕೆಳನ್ಯಾಯಾಲಯ ನಿರ್ಲಕ್ಷಿಸಿದೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ. ಪ್ರಕರಣದಲ್ಲಿ ಶರ್ಮಾ ಪಾಲ್ಗೊಳ್ಳುವಿಕೆಯನ್ನು ಸಾಕ್ಷ್ಯಗಳು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ. ಹೀಗಾಗಿ ಮೂರು ವಾರಗಳಲ್ಲಿ ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯದ ಮುಂದೆ ಶರಣಾಗುವಂತೆ ಶರ್ಮಾಗೆ ಸೂಚಿಸಲಾಗಿದೆ. ಇದೇ ವೇಳೆ ಪೊಲೀಸರೂ ಸೇರಿದಂತೆ 13 ಮಂದಿಗೆ ವಿಚಾರಣಾ ನ್ಯಾಯಾಲಯ ನೀಡಿದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇತರ ಆರು ಆರೋಪಿಗಳ ಅಪರಾಧ ಮತ್ತು ಜೀವಾವಧಿ ಶಿಕ್ಷೆ ರದ್ದುಗೊಳಿಸಿ ಖುಲಾಸೆಗೊಳಿಸಿದೆ.
22 ಮಂದಿ ಕೊಲೆ ಆರೋಪಿಗಳು: ಈ ಪ್ರಕರಣದಲ್ಲಿ 13 ಪೊಲೀಸರು ಸೇರಿದಂತೆ 22 ಜನರ ಮೇಲೆ ಕೊಲೆ ಆರೋಪ ಹೊರಿಸಲಾಗಿತ್ತು. 2013ರಲ್ಲಿ ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶರ್ಮಾರನ್ನು ಖುಲಾಸೆಗೊಳಿಸಿತ್ತು. 21 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 21 ಆರೋಪಿಗಳ ಪೈಕಿ ಇಬ್ಬರು ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.
ಹೈಕೋರ್ಟ್ನಲ್ಲಿ ಮೇಲ್ಮನವಿ: ಆರೋಪಿಗಳು ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಶರ್ಮಾರನ್ನು ಖುಲಾಸೆಗೊಳಿಸಿದ ನಿರ್ಧಾರದ ವಿರುದ್ಧ ಪ್ರಾಸಿಕ್ಯೂಷನ್ ಮತ್ತು ಮೃತನ ಸಹೋದರ ರಾಮಪ್ರಸಾದ್ ಗುಪ್ತಾ ಮೇಲ್ಮನವಿ ಸಲ್ಲಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಚವ್ಹಾಣ್ ವಾದ ಮಂಡಿಸಿ, ಪ್ರಸ್ತುತ ಪ್ರಕರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳೇ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಾದಿಸಿದ್ದರು.
2006 ನಕಲಿ ಎನ್ಕೌಂಟರ್ ಪ್ರಕರಣ ದಾಖಲು: ಈ ಪ್ರಕರಣದಲ್ಲಿ ಶರ್ಮಾಗೆ ಶಿಕ್ಷೆ ವಿಧಿಸಲು ಕೋರಿದ್ದ ಪ್ರಾಸಿಕ್ಯೂಷನ್, ಮಾಜಿ ಪೊಲೀಸ್ ಇಡೀ ಅಪಹರಣ ಮತ್ತು ಕೊಲೆ ಕಾರ್ಯಾಚರಣೆಯ ಮಾಸ್ಟರ್ ಮೈಂಡ್ ಎಂದು ವಾದಿಸಿತ್ತು. 11 ನವೆಂಬರ್ 2006ರಂದು, ಪೊಲೀಸ್ ತಂಡವು ಗುಪ್ತಾ ಅಲಿಯಾಸ್ ಲಖನ್ ಭಯ್ಯಾನನ್ನು ನೆರೆಯ ವಾಶಿಯಿಂದ ಬಂಧಿಸಿತ್ತು. ಆತ ರಾಜನ್ ಗ್ಯಾಂಗ್ನ ಸದಸ್ಯನೆಂದು ಶಂಕಿಸಲಾಗಿತ್ತು. ಈತನ ಸ್ನೇಹಿತ ಅನಿಲ್ ಭೇದಾ ಕೂಡ ಸಿಕ್ಕಿಬಿದ್ದಿದ್ದ. ಅದೇ ಸಂಜೆ ಉಪನಗರ ವರ್ಸೋವಾದ ನಾನಾ ನಾನಿ ಪಾರ್ಕ್ ಬಳಿ ನಕಲಿ ಎನ್ಕೌಂಟರ್ನಲ್ಲಿ ಗುಪ್ತಾ ಕೊಲ್ಲಲ್ಪಟ್ಟರು. ಈ ಘಟನೆಯ ಕುರಿತು ನಕಲಿ ಎನ್ಕೌಂಟರ್ ಪ್ರಕರಣ ದಾಖಲಾಗಿತ್ತು.
ಪ್ರದೀಪ್ ಶರ್ಮಾ ಯಾರು?: ಪ್ರದೀಪ್ ಶರ್ಮಾ ಅವರ ಪೊಲೀಸ್ ವೃತ್ತಿ ವಿವಾದಾತ್ಮಕವಾಗಿದೆ. ಉದ್ಯಮಿ ಮನ್ಸುಖ್ ಹಿರೇನ್ ಹತ್ಯೆ ಪ್ರಕರಣ ಮತ್ತು ಆಂಟಿಲಿಯಾ ಬಾಂಬ್ ಪ್ರಕರಣದಲ್ಲಿ ಪ್ರದೀಪ್ ಶರ್ಮಾ ಕೂಡ ಬಂಧಿತರು. ಇವರು 1983ರ ಬ್ಯಾಚ್ನ ಪೊಲೀಸ್ ಅಧಿಕಾರಿಯಾಗಿದ್ದು, 2020ರಲ್ಲಿ ನಿವೃತ್ತಿಯಾಗಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಸ್ವಯಂ ನಿವೃತ್ತಿ ಸ್ವೀಕರಿಸಿ ರಾಜಕೀಯಕ್ಕೆ ಕಾಲಿಟ್ಟಿದ್ದರು. ಆದರೆ ಪ್ರದೀಪ್ ಶರ್ಮಾ ರಾಜಕೀಯದಲ್ಲಿ ವಿಫಲರಾದರು.
ಇದನ್ನೂ ಓದಿ: ಒಂದೇ ದಿನದಲ್ಲಿ 3 ಅಪರಾಧ ಕೃತ್ಯ: ಐವರು ದರೋಡೆಕೋರರ ಬಂಧನ