ಉಡುಪಿ ಶ್ರೀಕೃಷ್ಣನ ಉತ್ಸವ... ಗಮನ ಸೆಳೆದ ''ಕೋ-ವಿಧ''
ಕೋವಿಡ್ ನಿಯಮ ಮತ್ತು ಭಾರೀ ಮಳೆಯ ನಡುವೆ ಉಡುಪಿ ಶ್ರೀಕೃಷ್ಣನ ಉತ್ಸವ ನಡೆದಿದೆ. ಮಹೋತ್ಸವದಲ್ಲಿ ಪ್ರತೀ ವರ್ಷ ನೂರಾರು ವೇಷಗಳು ವಿಟ್ಲಪಿಂಡಿ ಮೆರುಗನ್ನು ಹೆಚ್ಚಿಸುತ್ತವೆ. ಆದ್ರೆ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ಬೆರಳೆಣಿಕೆ ಸಂಖ್ಯೆಯಷ್ಟು ಮಾತ್ರ ವೇಷಗಳು ಕಂಡು ಬಂದವು. ಉಡುಪಿಯ ಕಲಾವಿದ ರಾಮಾಂಜಿ ಕೋ-ವಿಧ ಎಂಬ ವಿಭಿನ್ನ ಸಂದೇಶ ಸಾರುವ ವೇಷವನ್ನು ಧರಿಸಿ ಗಮನ ಸೆಳೆದಿದ್ದಾರೆ. ಹೌದು, ಕೊರೊನಾ, ಕೊರೊನಾ ಕಾಲ ಮತ್ತು ಕೊರೊನಾ ನಂತರ ಎಂಬ ಪರಿಕಲ್ಪನೆಯಲ್ಲಿ ವೇಷ ಮೂಡಿ ಬಂದಿತು. ಪ್ರತೀ ವರ್ಷ ವೇಷ ಹಾಕಿ ಧನ ಸಂಗ್ರಹ ಮಾಡಿ ಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಿದ್ದರು. 8ನೇ ವರ್ಷದ ಈ ವೇಷವನ್ನು ಹರಕೆ ರೂಪದಲ್ಲಿ ದೇವರಿಗೆ ಸಮರ್ಪಿಸಿದ್ದಾರೆ. ಜೊತೆಗೆ ಕೊರೊನಾ ಕಾಲದ ಸಂದೇಶವನ್ನು ರವಾನಿಸಿದ್ದಾರೆ. ಉಪನ್ಯಾಸಕ, ಕಲಾವಿದ ಪ್ರಶಾಂತ್ ಉದ್ಯಾವರ ಮತ್ತು ತಂಡ ಪ್ರತೀ ವರ್ಷದಂತೆ ಈ ಬಾರಿಯೂ ವಿಭಿನ್ನ ವಿನ್ಯಾಸದ ಮೂಲಕ ವೇಷ ಸೆಳೆಯುವಂತೆ ಮಾಡಿದ್ದಾರೆ.