ಡಿ.ರೂಪಾ ವಿರುದ್ಧ ಕೋರ್ಟ್ನಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ: ಆರ್ಟಿಐ ಕಾರ್ಯಕರ್ತ ಗಂಗರಾಜು
ಮೈಸೂರು: "ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ನನ್ನ ವಿರುದ್ಧ ಕೇವಲವಾಗಿ ಮಾತನಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ. ನನಗೆ ಪೊಲೀಸ್ ಠಾಣೆಯ ಮೇಲೆ ನಂಬಿಕೆ ಇಲ್ಲ" ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಅವರು ತಮ್ಮ ಹಾಗು ಡಿ.ರೂಪಾ ಅವರ ನಡುವೆ ನಡೆದ ಫೋನ್ ಸಂಭಾಷಣೆಯ ಆಡಿಯೋ ಕುರಿತು ಮಾಧ್ಯಮದೊಂದಿಗೆ ಮಾತನಾಡಿದರು.
"ನಾನು ಯಾರ ಪರವೂ ಇಲ್ಲ, ನ್ಯಾಯದ ಪರ ಇದ್ದೇನೆ. ರೂಪ ಅವರು ರೋಹಿಣಿ ಸಿಂಧೂರಿ ಬಗ್ಗೆ ನನ್ನ ಜೊತೆ ಮಾತನಾಡುವಾಗ ಬಳಸಿದ ಪದಗಳು ಹಾಗೂ ನನಗೆ ಧಮ್ಕಿ ಹಾಕಿದ ರೀತಿಯ ಬಗ್ಗೆ ಆಡಿಯೋ ಇದೆ. ಇದರ ಆಧಾರದ ಮೇಲೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ಹಾಕುತ್ತೇನೆ" ಎಂದರು.
"ನಾನು ದೂರು ನೀಡಲು ಮನೀಷ್ ಮೌದ್ಗಿಲ್ ಕಚೇರಿಗೆ ಹೋಗಿ ಅಲ್ಲಿಂದ ವಾಪಸ್ ಬರುವಾಗ ರೂಪಾ ಅವರು ಫೋನ್ ಮಾಡಿ ನನಗೆ ಧಮ್ಕಿ ಹಾಕುವ ರೀತಿ ಮಾತನಾಡಿದರು. ನಾನು ರೋಹಿಣಿ ಸಿಂಧೂರಿ ಅವರಿಗೆ ಸಹಾಯ ಮಾಡುವ ರೀತಿ ನಡೆದುಕೊಳ್ಳುತ್ತಿದ್ದೇನೆ ಎಂದು ನನ್ನನ್ನು ಹಿಯ್ಯಾಳಿಸಿದರು" ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾರನ್ನೂ ತಡೆದಿಲ್ಲ: ಡಿ. ರೂಪಾ