Published : Nov 13, 2023, 3:37 PM IST
|Updated : Nov 13, 2023, 3:59 PM IST
ರೌಡಿಗಳ ಪರೇಡ್: ಪರಿವರ್ತನೆ ಆಗುವಂತೆ ಡಿವೈಎಸ್ಪಿಯಿಂದ ಖಡಕ್ ವಾರ್ನಿಂಗ್
ಕೋಲಾರ: ವರ್ತನೆ ಬದಲಾಯಿಸಿಕೊಳ್ಳುವಂತೆ ಡಿವೈಎಸ್ಪಿ ಪಾಂಡುರಂಗ ಅವರು ರೌಡಿಗಳಿಗೆ ಕಿವಿ ಮಾತು ಹೇಳಿದರು. ಕೆಜಿಎಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೊಲೀಸ್ ಠಾಣೆಯ ಒಟ್ಟು 795 ರೌಡಿಗಳ ಮಾಹಿತಿ ಪಡೆದ ಅವರು, ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡು ಸಭ್ಯತೆಯಿಂದ ಸಮಾಜದಲ್ಲಿ ಬಾಳಬೇಕು, ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆಜಿಎಫ್ ನಗರದ ಡಿಎಆರ್ ಮೈದಾನದಲ್ಲಿ ಕೆಜಿಎಫ್ ಉಪ ವಿಭಾಗ ಮಟ್ಟದ ರೌಡಿ ಪರೇಡ್ ನಡೆಸಿದ ಅವರು, ಕೇಸ್ ಮುಕ್ತಾಯವಾಗಿದೆ ಎಂದು ನಿಮಗೆ ನೀವೇ ಸರ್ಟಿಫಿಕೇಟ್ ಕೊಡುವುದು, ಉದ್ದನೆಯ ಕೂದಲು ಬಿಟ್ಟುಕೊಂಡು ಜನರನ್ನು ಭೀತಿಗೊಳಿಸುವ ಕೆಲಸ ಆಗುತ್ತಿದೆ. ವಿಚಾರಿಸಿದರೆ ದೇವಸ್ಥಾನಕ್ಕೆ ಮುಡಿ ಕೊಡಲು ಎಂದು ಹೇಳುತ್ತಿದ್ದೀರಿ. ಅನುಮಾನ ವ್ಯಕ್ತವಾಗಿದ್ದರಿಂದ ಇಂತಹ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುವುದು ಎಂದು ಹೇಳಿದರು.
ಕೆಲ ರೌಡಿಗಳಿಗೆ ಭಾಷೆ ಬರುವುದಿಲ್ಲ, ಅವರು ಕನ್ನಡ ಕಲಿತುಕೊಳ್ಳಬೇಕು. ಭಾಷೆ ಬಾರದವರ ಮೇಲೆ ದುಂಡಾವರ್ತಿ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಡಕಾಯಿತಿ, ಸುಲಿಗೆ, ಸರಗಳ್ಳತನ, ಕೊಲೆ, ಡ್ರಗ್ಸ್ ಪ್ರಕರಣಗಳಲ್ಲಿ ಶಾಮೀಲಾಗಿರುವವರು, ಅನುಮತಿ ಇಲ್ಲದೆ ಗುಂಡು ಹಾರಿಸಿದವರು ಇದ್ದಾರೆ. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿವೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಲೋಕಸಭೆ ಚುನಾವಣೆಗಳು ಬರಲಿದೆ. ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಕಂಡು ಬಂದಲ್ಲಿ ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಒಟ್ಟು 795 ರೌಡಿಗಳ ಪೈಕಿ 621 ಎ ದರ್ಜೆ, 149 ಬಿ ದರ್ಜೆ ಮತ್ತು 25 ಮಂದಿಯನ್ನು ಸಿ ದರ್ಜೆಯ ರೌಡಿಶೀಟರ್ಗಳೆಂದು ವಿಗಡಿಸಿ ನಿಗಾ ಇಡಲಾಗುವುದು ಎಂದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಫೋಟೋಶೂಟ್ ವಿಚಾರಕ್ಕೆ ಗುಂಪುಗಳ ನಡುವೆ ಜಗಳ, ಯುವಕನ ಕೊಲೆ