ಕಾರವಾರದಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಕೃಷಿ ಭೂಮಿ ಜಲಾವೃತ - uttara kannada rain
🎬 Watch Now: Feature Video
ಕಾರವಾರ(ಉತ್ತರ ಕನ್ನಡ): ದೇಶಾದ್ಯಂತ ಮಾನ್ಸೂನ್ ಚುರುಕಾಗಿದೆ. ರಾಜ್ಯದಲ್ಲಿ ಕೊಂಚ ತಡವಾದರೂ ಸದ್ಯ ಹಲವೆಡೆ ವರುಣ ಆರ್ಭಟಿಸುತ್ತಿದ್ದಾನೆ. ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳೆದೆರಡು ದಿನಗಳಿಂದ ಎಡಬಿಡದೆ ಭಾರಿ ಮಳೆ ಸುರಿಯುತ್ತಿದೆ. ಕಾರವಾರದ ಬಿಣಗಾ ಗ್ರಾಮದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲಾಗದೇ ಮನೆ ಹಾಗೂ ಕೃಷಿ ಭೂಮಿಗಳಿಗೆ ಜಲ ದಿಗ್ಬಂಧನ ಹಾಕಿದೆ. ನಗರದಿಂದ ಎರಡು ಕಿ.ಮೀ ದೂರದಲ್ಲಿರುವ ಬಿಣಗಾದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಿತ್ತನೆ ಮಾಡಿದ್ದ ಭತ್ತ ಹಾಳಾಗಿದೆ.
ಹೊನ್ನಾವರ, ಭಟ್ಕಳ, ಕುಮಟಾ ಪಟ್ಟಣದ ತಗ್ಗು ಪ್ರದೇಶಗಳು ನೀರಿನಿಂದ ತುಂಬಿಕೊಂಡಿವೆ. ಹಲವೆಡೆ ಮಳೆ ನೀರು ಹೆಚ್ಚಾಗಿ ಜನ ಪರದಾಡುವಂತಾಯಿತು. ಅರಗಾದ ಮನೆಯೊಂದರಲ್ಲಿ ವೃದ್ಧೆ ತಾರಾಮತಿ (60) ಎಂಬವರು ಮೃತಪಟ್ಟಿದ್ದಾರೆ. ನಿನ್ನೆ ಬೆಳಗ್ಗೆ ಮನೆಯಂಗಳದಲ್ಲಿ ನೀರು ತುಂಬಿಕೊಂಡಿದ್ದು, ಮೃತದೇಹ ಪತ್ತೆಯಾಗಿತ್ತು. ಒಂಟಿಯಾಗಿ ವಾಸಿಸುತ್ತಿದ್ದ ಹಿನ್ನೆಲೆಯಲ್ಲಿ ಸಹಾಯಕ್ಕೆ ಯಾರೂ ಬಾರದೇ ಇದ್ದ ಕಾರಣ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು, ಕರಾವಳಿಯಲ್ಲಿ ಇಂದು ಎಲ್ಲೋ ಅಲರ್ಟ್, ನಾಳೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Monsoon Rain: ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ.. ಆರೆಂಜ್ ಅಲರ್ಟ್ ಘೋಷಣೆ, ಹಲವೆಡೆ ಹಾನಿ