thumbnail

ಸ್ಪತಃ ಪೊರಕೆ ಹಿಡಿದು ಇಡೀ ಕಚೇರಿ ಗುಡಿಸಿ ಮಾದರಿಯಾದರು ಈ ಉಪತಹಶಿಲ್ದಾರ..

By

Published : Mar 6, 2023, 3:40 PM IST

ಕಡಬ (ದಕ್ಷಿಣ ಕನ್ನಡ): ಮೇಲಧಿಕಾರಿಗಳು ಸಾಮಾನ್ಯವಾಗಿ ತಾವು ಕಚೇರಿಗೆ ಬಂದರೆ ತಮ್ಮ ಕೆಳಗಿನ ಸಿಬ್ಬಂದಿಗಳಲ್ಲಿ ಕಸಗುಡಿಸುವಂತಹ ಕೆಲಸ ಮಾಡಿಸುವುದು ವಾಡಿಕೆ. ಆದರೆ ಇಲ್ಲೊಬ್ಬರು ಉಪತಹಶಿಲ್ದಾರರು ಸ್ವತಃ ತಾವೇ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಮಾದರಿಯಾಗಿದ್ದಾರೆ. ಇವರ ಹೆಸರು ಗೋಪಾಲ್. ಕೆ. ಇವರು ಕಡಬ ತಾಲೂಕು ಕಚೇರಿಯಲ್ಲಿ ಉಪತಹಶಿಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಚೇರಿಗೆ ಸರಿಯಾದ ಸಮಯಕ್ಕೇ ಆಗಮಿಸುವ ಗೋಪಾಲ್ ಅವರಿಗೆ ತಮ್ಮ ಕಚೇರಿ ಸ್ವಚ್ಛವಾಗಿರಬೇಕು ಎಂಬುದು ಮುಖ್ಯ ಉದ್ದೇಶ. ಬೆಳಗ್ಗೆ ಕಚೇರಿಗೆ ಬಂದ ತಕ್ಷಣ ತನ್ನ ಬ್ಯಾಗ್​ ಅನ್ನು ತನ್ನ ಟೇಬಲ್ ಮೇಲೆ ಇಟ್ಟು ಪೊರಕೆಯನ್ನು ಹಿಡಿದು ಸಂಪೂರ್ಣ ಕಚೇರಿಯನ್ನು ಗುಡಿಸಿ ಸ್ವಚ್ಛ ಮಾಡುತ್ತಾರೆ. ನಂತರ ದೇವರಿಗೆ ಕೈಮುಗಿದು ಆ ದಿನದ ತನ್ನ ಕರ್ತವ್ಯ ಆರಂಭಿಸುತ್ತಾರೆ. ಗೋಪಾಲ್ ಅವರು ಉಪತಹಶಿಲ್ದಾರರ ಹುದ್ದೆಯಲ್ಲಿದ್ದರೂ ಈ ಹಿಂದಿನಿಂದಲೂ ಸರಳ ಸಜ್ಜನಿಕೆಗೆ ಹೆಸರುವಾಸಿಯಾದವರು. ಈ ತನಕ ಒಂದು ದ್ವಿಚಕ್ರ ವಾಹನವನ್ನೂ ಇವರು ಹೊಂದಿಲ್ಲ. ಆಟೋ ಅಥವಾ ಜೀಪ್ ಹತ್ತಿಕೊಂಡೇ ತನ್ನ ಕಚೇರಿಗೆ ಕರ್ತವ್ಯಕ್ಕೆ ಇವರು ಆಗಮಿಸುತ್ತಾರೆ.

ಸರ್ ತಾವು ಅಧಿಕಾರಿಯಾಗಿದ್ದೀರಿ ತಮಗೆ ಈ ಕೆಲಸವನ್ನು ಬೇರೆಯವರ ಕೈಯಲ್ಲಿ ಮಾಡಿಸಬಹುದಲ್ಲವೇ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಉಪತಹಶಿಲ್ದಾರ್ ಗೋಪಾಲ್ ಅವರು, "ಈ ಕಚೇರಿ ನನ್ನ ಅನ್ನಪೂರ್ಣೇಶ್ವರಿ. ನನಗೆ ನನ್ನ ಕುಟುಂಬಕ್ಕೆ ಅನ್ನ ಹಾಕೋದು ಈ ಕಚೇರಿ, ಅದನ್ನು ಸ್ವಚ್ಛವಾಗಿಡೋದು ನನ್ನ ಮೊದಲ ಕರ್ತವ್ಯ. ಅದರಲ್ಲಿ ನನಗೆ ಯಾವುದೇ ಮುಜುಗರ ಇಲ್ಲ. ಮಾತ್ರವಲ್ಲದೇ ನಾವು ಕೆಲಸ ಮಾಡಿಸುವುದರಲ್ಲಿ ಏನೂ ವಿಶೇಷತೆ ಇಲ್ಲ. ಬದಲಾಗಿ ನಾವೇ ಆ ಕೆಲಸವನ್ನು ಮಾಡಿ ತೋರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು" ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರ ಡಿಸಿ ಕಚೇರಿಯಲ್ಲಿದೆ ನೌಕರಿ: 105 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.