ಸಿಎಂ ಪರಮಾಧಿಕಾರ ಪ್ರಶ್ನಿಸೋದು ಸಾಧುವೂ ಅಲ್ಲ, ಸೌಜನ್ಯತೆಯೂ ಅಲ್ಲ: ಕಾರಜೋಳ
ಬೆಳಗಾವಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಿಎಂ ನಿರ್ದೇಶನದಂತೆ ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡಬೇಕು. 33 ಇಲಾಖೆಗೂ ಮುಖ್ಯಮಂತ್ರಿಗಳು ಅನುದಾನ ಹಂಚಿಕೆ ಮಾಡಿರುತ್ತಾರೆ. ಸಿಎಂ ಕೊಟ್ಟಿರುವ ಬಜೆಟ್ನಲ್ಲಿ 224 ಮತಕ್ಷೇತ್ರಕ್ಕೂ ಕೇಳಿದಷ್ಟು ಅನುದಾನ ಕೊಡಲು ಸಾಧ್ಯವಾಗಲ್ಲ. ಹೀಗಾಗಿ, ಶಾಸಕರು, ಸಂಸದರು ಅನುದಾನ ಕೋರಿ ನಮ್ಮ ಬಳಿಗೆ ಬಂದಾಗ ಸಿಎಂ ಅವರನ್ನು ಕೇಳಿ ಎಂದು ಹೇಳಿರುತ್ತೇವೆ. ಈ ಕುರಿತು ನಾನು ಕೆ.ಎಸ್.ಈಶ್ವರಪ್ಪನವರ ಜೊತೆ ಚರ್ಚೆ ಮಾಡಿಲ್ಲ. ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು. ಮುಖ್ಯಮಂತ್ರಿ ನಿರ್ದೇಶನದಂತೆ ಕೆಲಸ ಮಾಡಬೇಕಾಗುತ್ತದೆ ಎಂದರು.