ಗುರುಮಠಕಲ್: ಮುಂಗಾರು ಹಂಗಾಮು ಆರಂಭವಾಗುವ ಮುಂಚೆಯೇ ಕೃಷಿ ಇಲಾಖೆಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಅಗತ್ಯ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ದಾಸ್ತಾನು ಮಾಡಿದೆ.
ಮೇ ತಿಂಗಳು ಅರ್ಧ ಮುಗಿದಿದ್ದು, ಜೂನ್ ಮೊದಲ ವಾರದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ. ಗುರುಮಠಕಲ್ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು. ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಆರಂಭವಾಗಿದೆ. ಭೂಮಿ ಹದ ಮಾಡಿಕೊಂಡಿರುವ ರೈತರಿಗೆ ಕೃಷಿ ಇಲಾಖೆ ರೈತ ಸಂಪರ್ಕ ಕೆಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬೀಜ ಹಂಚಿಕೆ ಮಾಡಲಾಗುತ್ತಿದೆ. ತೊಗರಿ, ಉದ್ದು, ಹೆಸರು, ತಾಲೂಕಿನ ಪ್ರಧಾನ ಬೆಳೆಗಳಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಅನುಗುಣವಾಗಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ವಿತರಣೆ ಮಾಡುತ್ತಿರುವುದು ರೈತರಿಗೆ ವರದಾನವಾಗಿದೆ.
ಈಗ ಲಾಕ್ಡೌನ್ ಇರುವದರಿಂದ ನಮಗೆ ಬೀಜ ಹಾಗೂ ಗೊಬ್ಬರವನ್ನು ತರುವುದು ದೊಡ್ಡ ಸಮಸ್ಯೆಯಾಗಿದೆ. ವಾಹನ ಸಂಚಾರ ಸಮಸ್ಯೆ ಇದೆ. ಯಾವುದೇ ಕಾರಣಕ್ಕೂ ಮುಂಗಾರು ಹಂಗಾಮು ವಿಳಂಬ ಮಾಡುವಂತಿಲ್ಲ. ಸಕಾಲಕ್ಕೆ ಬಿತ್ತನೆ ಆಗಲೇಬೇಕು. ಆದ್ದರಿಂದ ಸರ್ಕಾರ ರೈತ ಸಂಪರ್ಕ ಕೇಂದ್ರದ ಬದಲು ಗ್ರಾಮ ಮಟ್ಟದಲ್ಲಿ ಇಲ್ಲವೇ ಪಂಚಾಯತ್ಗಳಲ್ಲಿ ಬೀಜ ಹಾಗೂ ಗೊಬ್ಬರದ ವಿತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಇನ್ನು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ್ ವಾರದ್ ಮಾತನಾಡಿ ತಾಲ್ಲೂಕಿನಲ್ಲಿ ಬೀಜಗಳ ಕೊರತೆಯಿಲ್ಲ. ಎಲ್ಲ ರೈತರಿಗೆ ಸಮರ್ಪಕವಾಗಿ ಬೀಜಗಳನ್ನು ವಿತರಣೆ ಮಾಡಲಾಗುವುದು. ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.