ಸುರಪುರ: ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸುವ ಮೂಲಕ ಬ್ಯಾಂಕ್ ವ್ಯವಹಾರದಲ್ಲಿ ಕನ್ನಡ ಬಳಕೆಗೆ ಆಗ್ರಹಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವುದರಿಂದ ಸಾಮಾಜಿಕ ಅಂತರಕ್ಕೆ ಧಕ್ಕೆ ಹಾಗೂ ಗ್ರಾಹಕರಿಗೆ ಸಮಸ್ಯೆಯಾಗದಿರಲೆಂದು ಕಡಿಮೆ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಬ್ಯಾಂಕ್ ವ್ಯವಹಾರದ ಎಲ್ಲಾ ನಮೂನೆಗಳು ಮತ್ತು ಚಲನ್ ಪ್ರತಿಗಳಲ್ಲಿ ಕನ್ನಡ ಬಳಸುವಂತೆ ಆಗ್ರಹಿಸಿದ ಭಿತ್ತಿ ಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಬ್ಯಾಂಕ್ನಲ್ಲಿ ವ್ಯವಹಾರಕ್ಕೆ ಬರುವ ಎಲ್ಲರೂ ಇಂಗ್ಲಿಷ್, ಹಿಂದಿ ಕಲಿತವರಿರುವುದಿಲ್ಲ. ಆದರೆ ಬ್ಯಾಂಕ್ನಲ್ಲಿಯ ಎಲ್ಲಾ ಅರ್ಜಿ ನಮೂನೆ ಮತ್ತು ಕಾಗದ ಪತ್ರಗಳು ಹಿಂದಿ ಇಂಗ್ಲಿಷ್ನಲ್ಲಿರುತ್ತವೆ. ಈ ಮೂಲಕ ಕನ್ನಡ ದ್ರೋಹ ಹಾಗೂ ಪರಭಾಷಾ ಹೇರಿಕೆ ನಡೆಸಲಾಗುತ್ತಿದೆ. ಇದರ ಬಗ್ಗೆ ಮನವಿ ಕೊಡಲು ಬರುವ ಹೋರಾಟಗಾರರ ಮನವಿ ಸ್ವೀಕರಿಸದೆ ವ್ಯವಸ್ಥಾಪಕರು ಅವಮಾನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.