ಯಾದಗಿರಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಯಾದಗಿರಿಯ ಟ್ವಿಂಕಲ್ ಬೆಲ್ ಹಾಗೂ ಇಂಡಿಯನ್ ಪಬ್ಲಿಕ್ ಸ್ಕೂಲ್ ಮಕ್ಕಳು ವಿನೂತನವಾಗಿ ಕೊರೊನಾ ಜಾಗೃತಿ ಮೂಡಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತವಾಗಿ ಶಾಲೆಯ ಅಧ್ಯಕ್ಷರಾದ ವೆಂಕಟರೆಡ್ಡಿ ಪಾಟೀಲ್ ಕುರಿಹಾಳ ಹಾಗೂ ಕಲ್ಯಾಣಿ ಪಾಟೀಲ್ ಅವರು ಆನ್ಲೈನ್ ಮುಖಾಂತರ ಮಕ್ಕಳಿಗೆ ವೇಷ ಭೂಷಣ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಶ್ರೀಕೃಷ್ಣ, ರಾಧೆಯ ಜೊತೆಗೆ ಕೊರೊನಾ ವಾರಿಯರ್ ಗಳಾದ ವೈದ್ಯರು, ಪೊಲೀಸರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ನಾನಾ ರೀತಿಯ ವೇಷ ಧರಿಸುವ ಮೂಲಕ ಮಕ್ಕಳು ಕೋವಿಡ್ ಜಾಗೃತಿ ಮೂಡಿಸಿದರು.

ಕೊರೊನಾ ಸಮಯದಲ್ಲಿ ಮಕ್ಕಳಿಗೆ ಉತ್ಸಾಹ ತುಂಬಿ ಶಾಲೆಯ ಆಡಳಿತ ಮಂಡಳಿ ಈ ರೀತಿಯಲ್ಲಿ ಸ್ಪರ್ಧೆ ಏರ್ಪಡಿಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
