ಸುರಪುರ(ಯಾದಗಿರಿ): ಹುಣಸಗಿ ತಾಲೂಕಿನ ಕಕ್ಕೇರಾದಲ್ಲಿ ಕೊರೊನಾ ಸೋಂಕಿಗೆ ಪತ್ರಕರ್ತ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಕ್ಕೇರಾದಲ್ಲಿ ದಶಕಕ್ಕೂ ಹೆಚ್ಚು ಕಾಲ ರಾಜ್ಯದ ಹೆಸರಾಂತ ಪತ್ರಿಕೆಯೊಂದರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಪತ್ರಕರ್ತ ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದಾರೆ. ಮೃತ ಪತ್ರಕರ್ತರಿಗೆ 52 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಕೆಮ್ಮು ಜ್ವರದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ಕಕ್ಕೇರಾ ಸರ್ಕಾರಿ ಆಸ್ಪತ್ರೆ ವೈದ್ಯರು ಮೃತರ ಪರೀಕ್ಷೆ ನಡೆಸಿದ್ದು, ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಅಲ್ಲದೇ, ಮೃತರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ನಿಯಮದಂತೆ ನೆರವೇರಿಸಿದ್ದಾರೆ.
ಪತ್ರಕರ್ತ ರ ನಿಧನಕ್ಕೆ ಶಾಸಕ ರಾಜುಗೌಡ, ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ರಾಜ್ಯಾಧ್ಯಕ್ಷ ನಾರಾಯಣ ಬಿ. ಸೇರಿದಂತೆ ಯಾದಗಿರಿ ಜಿಲ್ಲೆಯ ಅನೇಕ ಪತ್ರಕರ್ತರು ಶೋಕ ವ್ಯಕ್ತಪಡಿಸಿದ್ದಾರೆ.