ಸುರಪುರ: ಮಡುವಿನಲ್ಲಿ ಬಿದ್ದಿದ್ದ ಕುರಿಗಾಯಿಯನ್ನು ರಕ್ಷಿಸಿ ಬಾಲಕಿಯೋರ್ವಳು ಪ್ರಾಣ ಕಳೆದುಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಮೀಪದಲ್ಲಿರುವ ಅಡಕಲ್ ಬಂಡೆಯಲ್ಲಿ ಕುರಿಗಾಹಿ ನೀರು ಕುಡಿಯಲು ಹೋಗಿದ್ದ. ಆಗ ಆತ ಕಾಲು ಜಾರಿ ಮಡುವಿನಲ್ಲಿ ಬಿದ್ದಿದ್ದಾನೆ. ಈ ಸಮಯದಲ್ಲಿ ಅಲ್ಲೇ ಇದ್ದ ಬಾಲಕಿ ರಾಜಮ್ಮ(16) ಕುರಿಗಾಹಿಯ ಕೈ ಹಿಡಿದು ಮೇಲೆತ್ತಿದ್ದಾಳೆ. ಆದರೆ ದುರಾದೃಷ್ಟವಶಾತ್ ಬಾಲಕಿ ಕಾಲು ಜಾರಿ ಬಿದ್ದು ನೀರಿನಲ್ಲಿ ಸಾವನ್ನಪ್ಪಿದಳು. ಮೃತ ಬಾಲಕಿಯನ್ನು ಶಂಕ್ರಪ್ಪ ವಡ್ಡರ್ ಎಂಬುವವರ ಮಗಳು ಎಂದು ಗುರುತಿಸಲಾಗಿದೆ.
ಈಜು ಬಾರದ ಕುರಿಗಾಹಿ ಬಾಲಕಿ ಜೀವ ಉಳಿಸಲು ಸುತ್ತಲಿನ ಜನರಿಗೆ ಕೂಗಿದ್ದಾನೆ. ಆದರೆ ಗ್ರಾಮಸ್ಥರು ಸ್ಥಳಕ್ಕೆ ಬರುವ ಮುನ್ನವೇ ಬಾಲಕಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಹೊಸದಾಗಿ 1,806 ಮಂದಿಗೆ ಸೋಂಕು ದೃಢ, 42 ಮಂದಿ ಬಲಿ