ಗುರುಮಠಕಲ್: ಕೊರೊನಾ ಹರಡುವಿಕೆ ಹೆಚ್ಚಾಗುತ್ತಿದ್ದು ಜನರು ಕಡ್ಡಾಯವಾಗಿ ಮಾಸ್ಕ್ಗಳನ್ನು ಬಳಸಿಕೊಳ್ಳಬೇಕು. ಮಾಸ್ಕ್ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿರುವುದದಿಂದ ಅದು ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಬೇಕಿದೆ ಎಂದು ನಗರದ ಸಿಪಿಐ ದೇವೀಂದ್ರಪ್ಪ ಧೂಳಖೇಡ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸೇವಾ ಭಾರತಿ ಸಂಘದ ವತಿಯಿಂದ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಆಟೋ ಚಾಲಕರು, ಕ್ಷೌರಿಕ ಅಂಗಡಿಗಳು, ಗೂಡಂಗಡಿಗಳಿಗೆ ಸಾಮಾನ್ಯವಾಗಿ ಹೆಚ್ಚು ಜನರು ಬರುವುದರಿಂದಾಗಿ ಅಲ್ಲಿ ಸೋಂಕು ಹರಡಬಾರದೆಂಬ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುತ್ತಿರುವುದಾಗಿ ಸಂಸ್ಥೆಯ ಕಾರ್ಯಕರ್ತರು ತಿಳಿಸಿದರು.
ಪಿಎಸ್ಐ ಶೀಲಾದೇವಿ ನ್ಯಾಮನ್, ಡಾ.ಭಾಗಿರೆಡ್ಡಿ ಗುನ್ನಿ, ಸೇವಾ ಭಾರತಿ ಬಸಪ್ಪ ಸಂಜನೋಳ, ಮಹಾಂತೇಶ ಸಾಹುಕಾರ್, ವಿಶಾಲ ಮುತ್ತಿಗಿ ಸೇರಿದಂತೆ ಇತರರು ಈ ವೇಳೆ ಇದ್ದರು.