ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಮಂಗಳವಾರ ನಿಧನರಾದ ರೈತ-ಕಾರ್ಮಿಕ ಹೋರಾಟಗಾರ ಮಾರ್ಕ್ಸ್ ವಾದಿ ಮಾರುತಿ ಮಾನ್ಪಡೆಯವರ ನಿಧನಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಮಾರುತಿ ಮಾನ್ಪಡೆ ಅವರ ನಿಧನಕ್ಕೆ ಸಂತಾಪ ಸೂಚಿಸಲು ನಡೆದ ಸಭೆಯಲ್ಲಿ ಹಲವಾರು ಮಹನೀಯರುಗಳು ಭಾಗವಹಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸಭೆಯಲ್ಲಿದ್ದ ಅನೇಕ ಮುಖಂಡರು ಮಾತನಾಡಿ, ಮಾರುತಿ ಮಾನ್ಪಡೆಯವರು ಈ ದೇಶ ಕಂಡ ಕಾರ್ಮಿಕ ಹೋರಾಟಗಾರರಲ್ಲಿ ಮುಂಚೂಣಿ ಸ್ಥಾನದಲ್ಲಿದ್ದರು. ರಾಜ್ಯದಲ್ಲಿನ ಗ್ರಾಮ ಪಂಚಾಯತ್ಗಳಲ್ಲಿ ಖಾಯಂ ನೌಕರರಾಗಿ ದಿನಗೂಲಿ ನೌಕರರು ಇಂದು ಸರ್ಕಾರದ ಸಂಬಳ ಪಡೆಯುವಲ್ಲಿ ಮಾರುತಿ ಮಾನ್ಪಡೆಯವರ ಹೋರಾಟವೇ ಕಾರಣವಾಗಿದೆ ಎಂದರು.
ಸಭೆಯ ಆರಂಭದಲ್ಲಿ ಮಾರುತಿ ಮಾನ್ಪಡೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನಡೆಸಿ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ದೇವಿಂದ್ರಪ್ಪ ಪತ್ತಾರ್, ಎಲ್ಲಪ್ಪ ಚಿನ್ನ ಕಾರ್, ಅಪ್ಪಯ್ಯ ಹಿರೇಮಠ್, ಸುರೇಖಾ ಕುಲಕರ್ಣಿ, ಬಸಮ್ಮ ಆಲ್ಹಾಳ, ಮಲ್ಲಯ್ಯ ಕಮತಿಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.