ಯಾದಗಿರಿ: ನದಿ ಈಜಿಕೊಂಡು ಮಾವನ ಮನೆಗೆ ತೆರಳುತ್ತಿದ್ದ ವ್ಯಕ್ತಿವೋರ್ವ ಮಧ್ಯದಲ್ಲಿಯೇ ಸುಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕಿದ್ದ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದೆ.
ದೇವಾಪುರ ನಿವಾಸಿ ಗುತ್ತಪ್ಪ (30) ನದಿಯ ಮಧ್ಯದಲ್ಲಿ ಸಿಲುಕಿದ್ದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ದೇವಾಪೂರ ಹಾಗೂ ಶೆಳ್ಳಗಿಯ ನಡುವೆ ಕೃಷ್ಣಾ ನದಿ ಹರಿಯುತ್ತದೆ. ಎರಡು ಗ್ರಾಮಗಳ ನಡುವೆ ಅಂದಾಜು 1 ಕಿ.ಮೀ ಅಂತರವಿದೆ. ಆದರೆ, ರಸ್ತೆ ಮೂಲಕ ಊರು ಸೇರಬೇಕೆಂದರೆ 7 ಕಿ.ಮೀ ರಸ್ತೆ ಪ್ರಯಾಣ ಮಾಡಬೇಕು. ಆದ್ದರಿಂದ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಿದ್ರೆ ಕೆಲವರು ಈಜಿಕೊಂಡು ಆ ಗ್ರಾಮಕ್ಕೆ ಹೋಗುತ್ತಾರೆ.
ಸದ್ಯ, ನದಿಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಹೀಗಾಗಿ ದೇವಾಪೂರ ಗ್ರಾಮದ ಗುತ್ತಪ್ಪ, ನದಿಯ ಮೂಲಕ ಈಜಿಕೊಂಡು ಶೆಳ್ಳಗಿ ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ತೆರಳಲು ಯತ್ನಿಸಿದ್ದರು. ಆದ್ರೆ ನದಿ ಮಧ್ಯೆ ನೀರಿನ ಸುಳಿವಿನಲ್ಲಿ ಸಿಲುಕಿದ್ದರಿಂದ ನಿತ್ರಾಣಗೊಂಡು, ನದಿ ಮಧ್ಯೆದ ಬಂಡೆ ಮೇಲೆ ಮಲಗಿದ್ದರು.
ಕೆಲ ಹೊತ್ತಿನ ಬಳಿಕ ಸಹಾಯಕ್ಕಾಗಿ ಗುತ್ತಪ್ಪ ಕಿರುಚಾಡಿದ್ದರು. ಅದು ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದವರಿಗೆ ಕೇಳಿಸಿದೆ. ಬಳಿಕ ಗುತ್ತಪ್ಪನನ್ನ ರಕ್ಷಿಸಲು ನದಿ ತೀರದಲ್ಲಿ ಸ್ನಾನ ಮಾಡುತ್ತಿದ್ದವರು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸುದ್ದಿ ತಿಳಿದು ಅಗ್ನಿಶಾಮಕ ತಂಡ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗುತ್ತಪ್ಪನನ್ನು ರಕ್ಷಿಸಿದ್ದಾರೆ. ಸದ್ಯ ಸುರಪುರದ ಸರ್ಕಾರಿ ಆಸ್ಪತ್ರೆಗೆ ಗುತ್ತಪನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.