ವಿಜಯಪುರ: ಕೊರೊನಾ ಮಹಾಮಾರಿ ಮೊದಲನೇ ಅಲೆ ಮುಗಿದು, ಸದ್ಯ ಎರಡನೇ ಅಲೆಯ ಹಾನಿ ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆಯ ಆತಂಕವೂ ಇದೆ.
ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ ಜನರನ್ನು ಕಳೆದುಕೊಂಡಿದ್ದು, ಆ ಕುಟುಂಬಗಳು ಬೀದಿಗೆ ಬಂದಿವೆ. ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೇಷನ್) ಮಾಡುವುದೊಂದೇ ಶಾಶ್ವತ ಪರಿಹಾರ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ವಿಜಯಪುರದಲ್ಲಿಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಉಳಿದ ಎಲ್ಲ ವಿಷಯಗಳನ್ನು ಬದಿಗಿರಿಸಿ, ಅತೀ ಕಡಿಮೆ ಅವಧಿಯಲ್ಲಿ 100 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಮಾಡಿಸುವ ಅಭಿಯಾನವನ್ನು ಕೈಗೊಂಡು, ಅದಕ್ಕೆ ಎಲ್ಲಾ ಅಗತ್ಯ ನೆರವು ಒದಗಿಸಿ, ವಿಶೇಷ ಆದ್ಯತೆಯನ್ನು ನೀಡಬೇಕಾದ ತುರ್ತು ಅಗತ್ಯವಿದೆ. ಆಗ ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಮತ್ತು ಶಾಶ್ವತ ಪರಿಹಾರ ಸಾಧ್ಯ ಎಂದು ತಿಳಿಸಿದ್ದಾರೆ.
ಈಗಾಗಲೇ ವ್ಯಾಕ್ಸಿನೇಷನ್ ಮುಗಿಸಿರುವ ಅಮೆರಿಕಾ, ಯೂರೋಪಿಯನ್ ರಾಷ್ಟ್ರಗಳು, ಇಸ್ರೆಲ್ ಮತ್ತಿತರ ದೇಶಗಳು ಈ ಮಹಾಮಾರಿಯಿಂದ ಮುಕ್ತವಾಗಿ ಅಲ್ಲಿನ ಜನ-ಜೀವನ ಮುಂಚಿನಂತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆ ಮಾದರಿಯಲ್ಲಿ ಭಾರತದಲ್ಲಿಯೂ 130 ಕೋಟಿ ಜನರಲ್ಲಿ ಕನಿಷ್ಠ 100 ಕೋಟಿ ಜನರನ್ನು ಗುರಿಯಾಗಿಸಿ, ಈ ಲಸಿಕೆ ಹಾಕಿಸಬೇಕು. ನಮ್ಮ ದೇಶದಲ್ಲಿಯೇ ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಬೇಕು. ಅಗತ್ಯವಿರುವಷ್ಟು ಬೇರೆ ರಾಷ್ಟ್ರಗಳಿಂದ ಕೂಡ ಲಸಿಕೆ ಆಮದು ಮಾಡಿಕೊಂಡು, ಒಟ್ಟಾರೆ 100 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿ ನಮ್ಮ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಎಂ.ಬಿ.ಪಾಟೀಲ ಸಲಹೆ ನೀಡಿದ್ದಾರೆ.