ವಿಜಯಪುರ: ಕೃಷ್ಣಾ ಜಲ ನಿಗಮ ಮಂಡಳಿ(ಕೆಬಿಜೆಎನ್ಎಲ್) ಕಾಲುವೆ ಕ್ಲೋಸರ್ ಹಾಗೂ ವಿಶೇಷ ದುರಸ್ತಿ ಕಾಮಗಾರಿಗೆ ಕರೆದಿದ್ದ ಟೆಂಡರ್ ಮಾಡುವ ವಿಚಾರವಾಗಿ ಸ್ಥಳೀಯ ಗುತ್ತಿಗೆದಾರರು ಹಾಗೂ ಜಿಲ್ಲೆಯ ಬೇರೆ-ಬೇರೆ ಭಾಗದ ಗುತ್ತಿಗೆದಾರರ ಮಧ್ಯೆ ಗಲಾಟೆ ನಡೆದಿದೆ.
ಮುಳವಾಡ ಏತ ನೀರಾವರಿ ವಿಭಾಗ-1ರ ವ್ಯಾಪ್ತಿಯಲ್ಲಿನ ಕಾಲುವೆ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಇಂದು ಬೆಳಗ್ಗೆ 11 ಗಂಟೆ ಟೆಂಡರ್ ಓಪನ್ ಮಾಡಲು ಸಮಯ ನಿಗದಿಯಾಗಿತ್ತು. ದುರಸ್ತಿ ಕಾಮಗಾರಿಗೆ ಕರೆದಿದ್ದ ಟೆಂಡರ್ ಓಪನ್ ಮಾಡುವ ವಿಚಾರದಲ್ಲಿ ಗುತ್ತಿಗೆದಾರರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಟ್ಟಿಹಾಳದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ ಎದುರು ಈ ಗಲಾಟೆ ನಡೆದಿದೆ.
ಈ ವೇಳೆ ಸ್ಥಳೀಯ ಹಾಗೂ ಹೊರಗಿನ ಗುತ್ತಿಗೆದಾರರಿಗೆ ವಾಗ್ವಾದ ನಡೆದು, ಸ್ಥಳೀಯರಿಗೆ ಮಾತ್ರ ಟೆಂಡರ್ ನೀಡಬೇಕೆಂದು ಗಲಾಟೆ ನಡೆದಿದೆ. ಇಷ್ಟೆಲ್ಲಾ ಗಲಾಟೆ ನಡೆದರೂ ಸಹ ಪೊಲೀಸರು ಇತ್ತ ಸುಳಿಯದ ಹಿನ್ನೆಲೆ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.