ವಿಜಯಪುರ/ಬಾಗಲಕೋಟೆ: ಪೇಜಾವರ ಶ್ರೀಗಳು ಉಡುಪಿ ನಂತರ ವಿಜಯಪುರ ಹಾಗು ಬಾಗಲಕೋಟೆ ಜಿಲ್ಲೆಗಳ ಜೊತೆ ಅವೀನಾಭಾವ ಸಂಬಂಧ ಹೊಂದಿದ್ದರು ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ್ ತಿಳಿಸಿದ್ದಾರೆ.
2008ರಲ್ಲಿ ವಿಜಯಪುರದಲ್ಲಿ ಕೃಷ್ಣಮಠ ಪೇಜಾವರ ಶ್ರೀಗಳು ನಿರ್ಮಿಸಿದ್ದರು. 75ನೇ ಚಾತುರ್ಮಾಸವನ್ನು ವಿಜಯಪುರದಲ್ಲೇ ಅವರು ಕಳೆದಿದ್ದರು ಎಂದು ತಮ್ಮ ಹಳೆಯ ನೆನಪುಗಳನ್ನು ನೆನೆಸಿಕೊಂಡು ಹಿರಿಯ ಪತ್ರಕರ್ತ ಗೋಪಾಲ ನಾಯಕ್ ಸಂತಾಪ ಸೂಚಿಸಿದರು. ಇನ್ನು ಪೇಜಾವರ ಶ್ರೀಗಳು ಉಡುಪಿ ನಂತರ ಅತಿ ಹೆಚ್ಚು ಬಾಗಲಕೋಟೆ ಜಿಲ್ಲೆಯಲ್ಲಿ ನಂಟು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ 1969 ರಲ್ಲಿ ಉಡುಪಿಯ ಶಾಖಾ ಮಠಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಬೋಧನೆ ನೀಡುವ ಕಾರ್ಯ ಪ್ರಾರಂಭಿಸಿದರು. ಪ್ರತಿವರ್ಷ ಮೂರು, ನಾಲ್ಕು ಬಾರಿ ಬಾಗಲಕೋಟೆ ಜಿಲ್ಲೆಗೆ ಆಗಮಿಸುತ್ತಿದ್ದ ಶ್ರೀಗಳು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
1965 ರಲ್ಲಿ ಬಾಗಲಕೋಟೆ ನಗರದಲ್ಲಿ ಬ್ರಾಹ್ಮಣ ಬಡ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಅಖಿಲ ಭಾರತ ಮಾಧ್ವ ಮಹಾಮಂಡಳ ಸ್ಥಾಪನೆ ಮಾಡಿದ್ದರು. ನಗರದ ಕಾರಿಹಳ್ಳ ಸಮೀಪ ಛಬ್ಬಿ ವಕೀಲರು ದಾನ ಮಾಡಿದ್ದ ಭೂಮಿಯಲ್ಲಿ ವಸತಿ ನಿಲಯ ಆರಂಭಿಸಿದ್ದರು. ಇಲ್ಲಿಯವರೆಗೆ 8 ರಿಂದ 10 ಸಾವಿರ ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದು ವಿದ್ಯಾರ್ಜನೆ ಮಾಡಿ ವಿಶ್ವದ ಮೂಲೆ ಮೂಲೆಯಲ್ಲಿ ನೆಲೆಸಿದ್ದಾರೆ.
2019 ಮಾರ್ಚ್ 3 ರಂದು ಪೇಜಾವರ ಶ್ರೀಗಳಿಗೆ ಬಾಗಲಕೋಟೆ ನಗರದಲ್ಲಿ ತುಲಾಭಾರ ಮಾಡಿ, ಭಕ್ತರು ವಂದನೆ ಸಲ್ಲಿಸಿದ್ದರು. ಪೀಠಾಧಿಪತಿಗಳಾಗಿ 80 ವರ್ಷ ತುಂಬಿದ್ದರಿಂದ ತುಲಾಭಾರ ಕಾರ್ಯಕ್ರಮ ಜರುಗಿತ್ತು. 1986ರಲ್ಲಿ ಜಿಲ್ಲೆಯಲ್ಲಿ ಬರಗಾಲವಿದ್ದ ಕಾರಣ ಕೆರೆ ಹೂಳೆತ್ತುವ ಕಾರ್ಯ ಕೈಗೊಂಡು ಜನ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದರ ಜೊತೆಗೆ ಗೋಶಾಲೆ ಸ್ಥಾಪಿಸಿ ಸುಮಾರು 1,600 ಗೋವುಗಳಿಗೆ ಆಶ್ರಯ ನೀಡಿದ್ದರು.
ಶ್ರೀಗಳು ಬಾಗಲಕೋಟೆ ಸೇರಿದಂತೆ ವಿಜಯಪುರ, ಜಮಖಂಡಿ, ಮುಧೋಳ ಹಾಗೂ ಇಲಕಲ್ಲ ತಾಲೂಕಿನಲ್ಲಿ ಸಂಚಾರ ಮಾಡಿ ಪ್ರವಚನ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.