ಮುದ್ದೇಬಿಹಾಳ: ಕೊರೊನಾ ವೈರಸ್ ಹಾಗೂ ಸಾಂಕ್ರಾಮಿಕ ರೋಗ ತಡೆಗಟ್ಟಲು ಶುದ್ಧೀಕರಣ ಘಟಕದಲ್ಲಿ ತಮಿಳುನಾಡು ಮರಳು ಹಾಗೂ ಬಳ್ಳಾರಿ ಜಲ್ಲಿಕಲ್ಲು ಉಪಯೋಗಿಸಿ ನೀರು ಶುದ್ಧೀಕರಣಕ್ಕೆ ನಾಲತವಾಡ ಪಟ್ಟಣ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.
ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಸೂಚನೆ ಮೇರೆಗೆ ನಾಲತವಾಡ ಪಟ್ಟಣದ ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಧಿಕಾರಿಗಳು ಟೆಂಡರ್ ಮೂಲಕ ಗುತ್ತಿಗೆ ನೀಡಿ ತಮಿಳುನಾಡಿನಿಂದ ವಿಶೇಷ ಮರಳು ಹಾಗೂ ಬಳ್ಳಾರಿಯ ಮೂರು ತರಹದ ಜಲ್ಲಿಕಲ್ಲನ್ನು ಶುದ್ಧೀಕರಣಕ್ಕೆ ತರಿಸಿಕೊಳ್ಳಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನಾಲತವಾಡ ಪಟ್ಟಣದ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್. ದಾಯಿ ಈ ಘಟಕದಲ್ಲಿ ನೀರು ಶುದ್ಧೀಕರಿಸುವುದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಅದಕ್ಕಾಗಿ ಮೂರು ವಿಭಿನ್ನ ತರಹದ 800 ಚೀಲಗಳ ಮರಳನ್ನು ತಮಿಳುನಾಡಿನಿಂದ ಆಮದು ಮಾಡಿಕೊಂಡಿದ್ದು, ಶುದ್ಧೀಕರಣ ಘಟಕದಲ್ಲಿ ಬಳಸಲಾಗುತ್ತಿದೆ ಎಂದರು.
ಈ ವೇಳೆ ಕಿರಿಯ ಅಧಿಕಾರಿ ಚಂದ್ರಶೇಖರ ಸಾಗರ್, ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ ಅವಟಿ, ವಿರೇಶ ದೊಡಮನಿ, ಎಂಜಿನಿಯರ್ ವಿರೇಶ ತಂಗಡಗಿ ಉಪಸ್ಥಿತರಿದ್ದರು.