ಮುದ್ದೇಬಿಹಾಳ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವೆಂದು ಗುರುವಾರ ತಿರಸ್ಕೃತವಾಗಿದ್ದ ಇಬ್ಬರ ನಾಮಪತ್ರಗಳನ್ನು ಕಲಬುರಗಿ ಉಚ್ಚ ನ್ಯಾಯಾಲಯ ನೀಡಿರುವ ಆದೇಶದಂತೆ ಅಂಗೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಇಳಕಲ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಚುನಾವಣಾಧಿಕಾರಿ ಸಂತೋಷ, ಪಟ್ಟಣದ ಟಿಎಪಿಸಿಎಂಎಸ್ಗೆ ನ. 13ರಂದು ಚುನಾವಣೆ ನಡೆಯಲಿದೆ. ನ. 5 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದ್ದು, ಅಂದು ಮದ್ಯಾಹ್ನ 2.11ಕ್ಕೆ ಕಲಬುರಗಿ ಉಚ್ಚ ನ್ಯಾಯಾಲಯದ ಪ್ರಿನ್ಸಿಪಲ್ ಗೌರ್ನಮೆಂಟ್ ಅಡ್ವೋಕೇಟ್ ಕಚೇರಿಯ ಅನುರಾಧಾ ದೇಸಾಯಿ ಅವರು ನನ್ನ ದೂರವಾಣಿಗೆ ಕರೆ ಮಾಡಿ ಕೊಣ್ಣೂರಿನ ಶಂಕರಗೌಡ ಹಿಪ್ಪರಗಿ ಹಾಗೂ ಬಸರಕೋಡದ ಮನೋಹರ ಮೇಟಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಸೂಚಿಸಿದ್ದಾರೆ.
ಅದರ ಆದೇಶದ ಪ್ರತಿಯನ್ನು ನನ್ನ ಇ ಮೇಲ್ ಮೂಲಕ ರವಾನಿಸುವುದಾಗಿ ಸೂಚಿಸಿದರು. ಸದರಿ ಆದೇಶದಂತೆ ನಾಮಪತ್ರ ಸ್ವೀಕರಿಸಲಾಯಿತು. ನಾಮಪತ್ರ ಸಲ್ಲಿಸುವ ಅವಧಿಯು ಮದ್ಯಾಹ್ನ 3 ಗಂಟೆ ಒಳಗಾಗಿ ಸದರಿ ಕಚೇರಿಯಿಂದ ಹಾಗೂ ದೂರುದಾರರಿಂದ ಅಧಿಕೃತ ಆದೇಶ ಸಲ್ಲಿಸಿರುವುದಿಲ್ಲ. ಆದ್ದರಿಂದ ಅವರಿಬ್ಬರ ನಾಮಪತ್ರ ಸ್ವೀಕೃತಗೊಂಡಿರುವುದಿಲ್ಲ ಎಂದು ನೋಟಿಸ್ ಪ್ರಕಟಿಸಲಾಗಿತ್ತು.
ಬಳಿಕ ನ. 5ರಂದು ಸಂಜೆ 5.21ಕ್ಕೆ ತಮ್ಮ ಇ ಮೇಲ್ಗೆ ಕಲಬುರಗಿ ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ರವಾನಿಸಲಾಗಿದ್ದು, ಅದರಂತೆ ಬ. ವರ್ಗದ ಸದಸ್ಯರ ಮತಕ್ಷೇತ್ರಕ್ಕೆ ಮನೋಹರ ಮೇಟಿ ಹಾಗೂ ಶಂಕರಗೌಡ ಹಿಪ್ಪರಗಿ ಅವರ ನಾಮಪತ್ರಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಎಂಟು ಕ್ಷೇತ್ರಕ್ಕೆ 23 ನಾಮಪತ್ರಗಳು ಅಂಗೀಕಾರಗೊಂಡಂತಾಗಿದ್ದು ಎಸ್ಟಿಯಿಂದ ಗುರಣ್ಣ ಹತ್ತೂರ ಒಬ್ಬರೇ ನಾಮಪತ್ರ ಸಲ್ಲಿಸಿರುವ ಕಾರಣ ಅವರ ಅವಿರೋಧ ಆಯ್ಕೆ ಸಾಧ್ಯತೆ ನಿಚ್ಚಳವಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ.
ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಶಂಕರಗೌಡ ಹಿಪ್ಪರಗಿ ಹಾಗೂ ಮನೋಹರ ಮೇಟಿ, ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುವಂತೆ ಚುನಾವಣಾಧಿಕಾರಿಗೆ ತಿಳಿಸಿದ್ದೆವು. ಆದರೆ ಕೆಲವರ ವಿರೋಧದಿಂದಾಗಿ ನಾಮಪತ್ರ ತಿರಸ್ಕಾರ ಮಾಡಿರುವುದಾಗಿ ಚುನಾವಣಾಧಿಕಾರಿಗಳು ಘೋಷಿಸಿದ್ದರು. ನ್ಯಾಯಾಲಯದ ಆದೇಶದ ಬಳಿಕ ನಮ್ಮ ನಾಮಪತ್ರಗಳನ್ನು ಆರ್.ಒ ಸ್ವೀಕರಿಸಿದ್ದಾರೆ. ವಿರೋಧಿಗಳು ಮೊದಲು ಕಾನೂನು ಏನು ಎಂಬುದನ್ನು ತಿಳಿದುಕೊಂಡು ಆಕ್ಷೇಪ ಮಾಡುವುದು ಒಳ್ಳೆಯದು. ಒಂದು ವೇಳೆ ಚುನಾವಣಾಧಿಕಾರಿ ನಾಮಪತ್ರ ಅಂಗೀಕರಿಸದಿದ್ದರೆ ನ್ಯಾಯಾಂಗ ನಿಂದನೆ ಆರೋಪ ಎದುರಿಸಿ ಸೇವೆಯಿಂದ ಅಮಾನತು ಆಗುವ ಸಾಧ್ಯತೆಯೂ ಇತ್ತು ಎಂದು ಹೇಳಿದರು.