ಮುದ್ದೇಬಿಹಾಳ: ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್.ಟಿ) ದ ಜಾತಿ ಪ್ರಮಾಣ ಪತ್ರ ನೀಡದಂತೆ ತಡೆಯಲು ಕೆಲ ರಾಜಕಾರಣಿಗಳು ಕಾರಣರಾಗಿದ್ದಾರೆಂದು ಆರೋಪಿಸಿರುವ ಸಮಾಜದ ಬಾಂಧವರು, ಸಂಸದ ರಮೇಶ ಜಿಗಜಿಣಗಿ ಅವರನ್ನು ಪಕ್ಷದಿಂದ ವಜಾ ಮಾಡಬೇಕು ಮತ್ತು ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಹಶೀಲ್ದಾರ್ ಕಚೇರಿಗೆ ಆಗಮಿಸಿದ ತಾಲೂಕು ತಳವಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ತಹಶೀಲ್ದಾರ್ ಜಿ.ಎಸ್. ಮಳಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಕೆಲ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದಿರುವ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
![Appeal letter](https://etvbharatimages.akamaized.net/etvbharat/prod-images/07:16:33:1597499193_kn-mbl-talawarstnews-15-05-kac10030_15082020185149_1508f_1597497709_349.jpg)
ತಳವಾರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ನೀಡಿ ಕಾನೂನು ಮತ್ತು ನ್ಯಾಯ ಸಚಿವಾಲಯ ರಾಷ್ಟ್ರಪತಿಗಳಿಂದ ರುಜುವನ್ನು ಪಡೆದು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಲ್ಲದೇ ಮೇ.28 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಕೂಡಾ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪತ್ರವನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಲುಪಿಸುವ ಕಾರ್ಯ ಮಾಡದೆ ಮುಚ್ಚಿಟ್ಟಿದ್ದಾರೆ, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
![Appeal letter](https://etvbharatimages.akamaized.net/etvbharat/prod-images/07:16:34:1597499194_kn-mbl-talawarstnews-15-05-kac10030_15082020185149_1508f_1597497709_365.jpeg)
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೂ.6 ರಂದು ಗೊಂದಲಮಯ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದಾರೆ. ಇದರ ಹಿಂದೆ ಕಾಣದ ರಾಜಕೀಯ ಕೈಗಳಿವೆ ಎಂದು ತಾಲೂಕು ತಳವಾರ ಸೇವಾ ಸಂಘದ ಅಧ್ಯಕ್ಷ ರಾಮನಗೌಡ ಎನ್. ಪಾಟೀಲ ದೂರಿದರು.
ಈ ವೇಳೆ ತಳವಾರ ಸಮಾಜದ ಎಂ.ಎಂ. ಕೋಲಕಾರ, ಎನ್.ಎಸ್. ಕಟ್ಟಿಮನಿ, ಎನ್.ಎಮ್. ಅಂಬಿಗೇರ, ಎಮ್.ಎಸ್. ಕಟ್ಟಿಮನಿ, ಹೆಚ್.ಸಿ.ತಳವಾರ, ಬಿ.ಎಸ್.ಕಟ್ಟಿಮನಿ, ಎಮ್.ಎಮ್.ತಾಳಿಕೋಟಿ, ಪರಶುರಾಮ ತಾಳಿಕೋಟಿ, ಸಂದೀಪ ಬಿದರಕೋಟಿ, ಬಸವರಾಜ ತಳವಾರ ಇದ್ದರು.