ಹಾವೇರಿ: ಹಾನಗಲ್ ತಾಲೂಕಿನ ಆಡೂರು ಗ್ರಾಮದ ಮಾಲತೇಶ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಅಂಗವಾಗಿ ಕಾರ್ಣಿಕೋತ್ಸವ ನಡೆಯಿತು. ಸುಮಾರು 12 ಅಡಿ ಬಿಲ್ಲನೇರಿದ ಗೊರವಪ್ಪ ಹನುಮಗೌಡ ಪ್ರಸ್ತುತ ವರ್ಷದ ಭವಿಷ್ಯವಾಣಿ ನುಡಿದರು. "ತುಂಬಿದ ಕೊಡ ಉರಡೀತಲೇ, ತುಪ್ಪದ ಕೊಡ ಉಕ್ಕೀತಲೇ ಪರಾಕ್" ಎಂದು ನುಡಿದ ಗೊರವಪ್ಪ ಬಿಲ್ಲಿನಿಂದ ಧುಮುಕಿದರು. ಗೊರವಪ್ಪನನ್ನು ನೆಲಕ್ಕೆ ಬೀಳದಂತೆ ಭಕ್ತರು ಹಿಡಿದರು.
ಗೊರವಪ್ಪ ಕಾರ್ಣಿಕ ನುಡಿಯುತ್ತಿದ್ದಂತೆ ಸ್ಥಳದಲ್ಲಿದ್ದ ಭಕ್ತರು ಕಾರ್ಣಿಕದ ವಿಶ್ಲೇಷಣೆ ಮಾಡಿದರು. ಪ್ರಸಕ್ತ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿವೆ ಎಂದು ತಿಳಿಸಿದರು. ಭರತ ಹುಣ್ಣಿಮೆಯಂದು ಆಡೂರಲ್ಲಿ ಕಾರ್ಣಿಕವಾದರೆ ಭರತ ಹುಣ್ಣಿಮೆಯ ಎರಡು ದಿನಗಳ ನಂತರ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಶುಕ್ರವಾರ ಮೈಲಾರಲಿಂಗೇಶ್ವರ ಕಾರ್ಣಿಕ ನಡೆಯಲಿದೆ. ಈ ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರಲಿದ್ದಾರೆ.
ಇದನ್ನೂ ಓದಿ: ಭರತ ಹುಣ್ಣಿಮೆ ಜಾತ್ರೆ; ಯಲ್ಲಮ್ಮನ ಗುಡ್ಡದಲ್ಲಿ ಭಕ್ತಸಾಗರ; ಉಧೋ, ಉಧೋ, ಯಲ್ಲಮ್ಮ ನಿನ್ಹಾಲ್ಕ ಉಧೋ!