ವಿಜಯಪುರ : ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲಾ ಜಲಾಶಯಗಳ ಮೂಲಕ ವಾರ್ಷಿಕ 2-3 ಬಾರಿ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿ ಸಭಾಂಗಣದಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಲಾಶಯಗಳಿಗೆ ಒಳಹರಿವಿನ ಆಧಾರದ ಮೇಲೆ ಈಗಾಗಲೇ ನೀರು ಬಿಡುವ ವ್ಯವಸ್ಥೆ ಜಾರಿಯಲ್ಲಿದೆ. ರಾಜ್ಯ ಮಟ್ಟದಲ್ಲಿ ಎಲ್ಲಾ ಜಲಾಶಯಗಳಿಂದ ವರ್ಷವೊಂದರಲ್ಲಿ 2-3 ಬಾರಿ ನೀರನ್ನ ಹರಿಸಿ ಕೆರೆ ಭರ್ತಿ ಮಾಡುವ ಕುರಿತಂತೆ ಅವಶ್ಯಕ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಯತ್ನಿಸಲಾಗುವುದು. ಎಲ್ಲಾ ಜನಪ್ರತಿನಿಧಿಗಳ ಸಹಕಾರದೊಂದಿಗೆ ಪಕ್ಷಬೇಧ ಮರೆತು ಕಾರ್ಯ ನಿರ್ವಹಿಸೋಣ ಎಂದರು. ಇತ್ತೀಚೆಗೆ ಬಂದಿದ್ದ ನೆರೆ ಹಾವಳಿ ಸಂದರ್ಭದಲ್ಲಿ ಮುಳುಗಡೆಯಾದ ಗ್ರಾಮಗಳ, ಪ್ರದೇಶಗಳಿಗೆ ಸಂಬಂಧ ಪಟ್ಟಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾಡಳಿತಗಳ ಸಮನ್ವಯತೆಯಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತೆ.
ಬಾಗಲಕೋಟೆ ಜಿಲ್ಲೆಯ ರಾಮಥಾಳ ಯೋಜನೆ ಕಾಮಗಾರಿಗೆ ಕಳಪೆ ಗುಣಮಟ್ಟದ ಪೈಪ್ ಬಳಸಿರುವ ಹಿನ್ನೆಲೆಯಲ್ಲಿ ಮತ್ತು ಈ ಹಿಂದೆ ಬಳೂತಿ ಮತ್ತು ಹನುಮಾಪೂರ ಜಾಕ್ವೆಲ್ಗಳಲ್ಲಿ ಅಗ್ನಿ ಅವಘಡಗಳು ನಡೆದ ಹಿನ್ನೆಲೆ ಹಾಗೂ ಎರಡೂ ಜಿಲ್ಲೆಗಳ ಶಾಸಕರ ದೂರಿನ ಹಿನ್ನೆಲೆಯಲ್ಲಿ ಮೇಘಾ, ನೆಟಾಫಿನ್ ಮತ್ತು ಜೈನ್ ಕಂಪನಿಗಳಿಗೆ ಮುಂದಿನ ದಿನಗಳಲ್ಲಿ ಯೋಜನೆಗಳಡಿ ಕೆಲಸ ನೀಡುವ ಮುಂಚೆ ಕೂಲಂಕಷ ಪರಿಶೀಲನೆ ನಡೆಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ದೇವಾನಂದ ಚೌಹಾಣ್, ಎಂ ಸಿ ಮನಗೂಳಿ, ಅರುಣ್ ಶಹಾಪೂರ, ಎ ಎಸ್ ಪಾಟೀಲ(ನಡಹಳ್ಳಿ),ಸೋಮನಗೌಡ ಪಾಟೀಲ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮುಖ್ಯ ಅಭಿಯಂತರ ಕುಲಕರ್ಣಿ ಹಾಗೂ ಇತರರಿದ್ದರು.