ವಿಜಯಪುರ: ಉಕ್ರೇನ್ನಲ್ಲಿ ಎಂಬಿಬಿಎಸ್ನ ಎರಡನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ಸ್ನೇಹಾ ಪಾಟೀಲ್ ಭಾರತಕ್ಕೆ ಬಂದು ತಲುಪಿದ್ದಾರೆ. ಸ್ನೇಹಾ ಪಾಟೀಲ್ ಫೆಬ್ರವರಿ 22ರಂದು ಉಕ್ರೇನ್ನಿಂದ ವಿಮಾನದ ಮೂಲಕ ಹೊರಟಿದ್ದರು. ಫೆಬ್ರವರಿ 23ಕ್ಕೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಇಂದು ಸಂಜೆ ವಿಜಯಪುರಕ್ಕೆ ಆಗಮಿಸಿದ್ದು, ಕುಟುಂಬಸ್ಥರ ಆತಂಕ ದೂರವಾಗಿ ಸಂತಸ ಮನೆ ಮಾಡಿದೆ.
ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ಆಕ್ರಮಣವನ್ನು ಮುಂದುವರಿಸಿದ್ದು, ಅಲ್ಲಿರುವ ಭಾರತೀಯರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿವಿಧ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳೀಗ ದೇಶಕ್ಕೆ ಮರಳಲು ಪರದಾಡುವಂತಾಗಿದೆ. ವಿಜಯಪುರದ ಐಶ್ವರ್ಯ ನಗರದ ಗುತ್ತಿಗೆದಾರರಾದ ರಮೇಶಗೌಡ ಹಾಗೂ ಸುನೀತಾ ಪಾಟೀಲ ದಂಪತಿ ಪುತ್ರಿ ಸ್ನೇಹಾ ಪಾಟೀಲ್ ವಾಪಸ್ ಮನೆಗೆ ಬಂದಿದ್ದಾರೆ.
ಅವರು ಉಕ್ರೇನ್ ದೇಶದ ಕಾಕ್ರಿ ವಿವಿಯಲ್ಲಿ ಎಂಬಿಬಿಎಸ್ ನ ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯುದ್ಧ ಭೀತಿ ಆವರಿಸಿದಾಗ ಪೋಷಕರ ಒತ್ತಾಯಕ್ಕೆ ಮಣಿದು ಫೆ. 22ರಂದು ಉಕ್ರೇನ್ನಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅಲ್ಲಿಂದ ಶುಕ್ರವಾರ (ಫೆ. 25)ರಂದು ವಾಪಸ್ ವಿಜಯಪುರಕ್ಕೆ ಆಗಮಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಸ್ನೇಹಾ ಪಾಟೀಲ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ನಾನು ಉಕ್ರೇನ್ನಲ್ಲಿ ಇದ್ದಾಗಲೇ ಯುದ್ಧದ ಕಾರ್ಮೋಡ ಆವರಿಸಿತ್ತು. ನಗರ ಪ್ರದೇಶದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ ಗಡಿಭಾಗದಿಂದ ಬಾಂಬ್ ಸ್ಫೋಟದ ಶಬ್ದ ಕೇಳುತ್ತಿರುವ ಕಾರಣ ಸ್ವಲ್ಪ ಭಯವಾಗಿತ್ತು. ಆ ಪ್ರದೇಶದಲ್ಲಿ ಇನ್ನೂ 50ಕ್ಕೂ ಹೆಚ್ಚು ಕನ್ನಡಿಗರು ಇದ್ದಾರೆ. ಆಫ್ ಲೈನ್ ಪರೀಕ್ಷೆ ಇರುವ ಕಾರಣ ಸಾಕಷ್ಟು ವಿದ್ಯಾರ್ಥಿಗಳು ದೇಶಕ್ಕೆ ಬರಲಿಲ್ಲ. ಅಲ್ಲಿನ ಉಪನ್ಯಾಸಕರು ಸಹ ಭಾರತಕ್ಕೆ ವಾಪಸ್ ಹೋಗುವರು ಹೋಗಬಹುದು ಎಂದಿದ್ದರು. ಅವರಿಗೆ ಆನ್ಲೈನ್ ಕ್ಲಾಸ್, ಅಲ್ಲಿಯೇ ಇರುವರಿಗೆ ಆಫ್ ಲೈನ್ ಮಾಡಲು ಅವಕಾಶ ನೀಡಿದ್ದರು. ಆದರೆ ನಾನು ನಮ್ಮ ಪೋಷಕರ ಒತ್ತಾಯಕ್ಕೆ ಮಣಿದು ವಾಪಸ್ ದೇಶಕ್ಕೆ ಬಂದಿದ್ದೇನೆ. ಈಗ ಉಕ್ರೇನ್ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ನಾನು ವಾಪಸ್ ಮನೆ ಸೇರಿದ್ದು, ಕುಟುಂಬದವರ ಜೊತೆ ಕಾಲ ಕಳೆಯುವುದು ಸಂತಸ ತಂದಿದೆ ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಇದನ್ನೂ ಓದಿ: ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ವಿಜಯಪುರದ ಸ್ನೇಹಾ ಪಾಟೀಲ್
ಇದೇ ವೇಳೆ ಸ್ನೇಹಾ ಅವರ ತಾಯಿ ಸುನೀತಾ ಪಾಟೀಲ ಮಾತನಾಡಿ, ಟಿವಿಯಲ್ಲಿ ಉಕ್ರೇನ್ ಯುದ್ಧದ ಕುರಿತು ಕೇಳಿದಾಗ ಭಯದ ಜೊತೆ ಆತಂಕ ಸಹ ಮನೆ ಮಾಡಿತ್ತು. ಮಗಳು ಸ್ನೇಹಾ ಅಲ್ಲಿಂದ ಸುರಕ್ಷಿತವಾಗಿ ವಾಪಸ್ ಆಗಬೇಕು ಎಂದು ನಾವೆಲ್ಲ ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಸ್ನೇಹಾ ತಂದೆಯ ಸತತ ಪ್ರಯತ್ನದಿಂದ ಮಗಳು ಸುರಕ್ಷಿತವಾಗಿ ವಾಪಸ್ ಆಗಿದ್ದಾಳೆ. ಅವಳಂತೆ ಉಳಿದ ಭಾರತೀಯರು ಸಹ ಸುರಕ್ಷಿತವಾಗಿ ವಾಪಸ್ ಆಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.