ಮುದ್ದೇಬಿಹಾಳ(ವಿಜಯಪುರ): ನಗರದಲ್ಲಿ ಸುರಿದ ಭಾರಿ ಗಾಳಿ, ಮಳೆಯಿಂದ ಜಾತ್ರೆಯಲ್ಲಿ ಪಾಲ್ಗೊಂಡ ಮಕ್ಕಳು, ಮಹಿಳೆಯರು ಪರದಾಡಿದ್ದಾರೆ. ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಜಾತ್ರೆಯ ಸಲುವಾಗಿ ಹಾಕಿದ್ದ ತಿನಿಸುಗಳ ಅಂಗಡಿ, ಸ್ಟೇಷನರಿ, ಬಳೆ, ಆಟಿಕೆ ಅಂಗಡಿಗಳಿಗೆ ಮಳೆ, ಬಿರುಗಾಳಿಗೆ ಸಿಲುಕಿ ನೆಲಕ್ಕುರುಳಿವೆ. ಜಾತ್ರೆಗೆ ಅಂಗಡಿಗಳನ್ನು ಹಾಕಿದವರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹರಸಾಹಸ ಪಟ್ಟಿದ್ದಾರೆ.
![Rain related incidents near vijapur](https://etvbharatimages.akamaized.net/etvbharat/prod-images/15492212_965_15492212_1654587462016.png)
ಪುರಸಭೆ, ಜಾತ್ರಾ ಸಮಿತಿ ಸ್ಪಂದನೆ: ರಾತ್ರಿಯಿಡಿ ಸುರಿದ ಮಳೆಯಿಂದ ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡ ಅಂಗಡಿಕಾರರಿಗೆ ಪುರಸಭೆ ಆಡಳಿತ ಮಂಡಳಿ, ಜಾತ್ರಾ ಸಮಿತಿಯವರು ಅಂಬೇಡ್ಕರ್ ಭವನ, ವಿಜಯ ಮಹಾಂತೇಶ ಮಂಗಲ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದರು. ಅಲ್ಲದೇ ರಾತ್ರಿ ಹಾಗೂ ಬೆಳಗ್ಗೆ ಉಪಹಾರ ಕೊಟ್ಟು ಅವರ ಹಸಿವು ತಣಿಸಿದರು. ಎಸ್ಬಿಐ ಬ್ಯಾಂಕ್ಗೆ ತೆರಳುವ ರಸ್ತೆ ಹಾಗೂ ಕೃಷಿ ಇಲಾಖೆಯ ಆವರಣದಲ್ಲಿ ಮರಗಳು ಧರೆಗುರುಳಿದಿದ್ದು, ಜಾತ್ರೆಗೆ ಹಾಕಿದ್ದ ಸ್ವಾಗತದ ಬ್ಯಾನರ್ಗಳು ಹರಿದು ಚಿಂದಿಯಾಗಿವೆ.
![Rain related incidents near vijapur](https://etvbharatimages.akamaized.net/etvbharat/prod-images/15492212_131_15492212_1654587482962.png)
ಜಾತ್ರಾ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲೆಯಲ್ಲಿ ನಡೆಯಬೇಕಿದ್ದ ರಸಮಂಜರಿ ಕಾರ್ಯಕ್ರಮ, ಕುಸ್ತಿ ಪಂದ್ಯ ಹಾಗೂ ಮದ್ದು ಸುಡುವ ಕಾರ್ಯಕ್ರಮಗಳನ್ನು ಮಳೆಯ ಕಾರಣದಿಂದ ಸ್ಥಗಿತಗೊಳಿಸಲಾಯಿತು. ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಊರಿಗೆ ತೆರಳಲು ಬಸ್ ಇಲ್ಲದೆ ಪರದಾಡಿದರು. ಇನ್ನೂ ಕೆಲವರು ಸರ್ಕಾರಿ ಶಾಲೆಗಳು, ಅಂಗಡಿಗಳ ಮುಂದೆಯೇ ವಾಸ್ತವ್ಯ ಹೂಡಿದ್ದರು. ಪಿಎಸ್ಐ ರೇಣುಕಾ ಜಕನೂರ ಹಾಗೂ ಸಿಬ್ಬಂದಿ ವಾಹನ ದಟ್ಟಣೆ ನಿಯಂತ್ರಿಸಲು ಮಳೆಯಲ್ಲಿಯೇ ನೆನೆದು ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಹಲವರಿಗೆ ಗಾಯ: ಫ್ಲೆಕ್ಸ್ಗೆ ಕಟ್ಟಿದ್ದ ಕಲ್ಲು ಬಡಿದು ಪಟ್ಟಣದ ನಿವಾಸಿ ರೂಪಾ ಮೋಟಗಿ ಎಂಬುವರ ತಲೆಗೆ ಗಾಯವಾಗಿದೆ. ಅಲ್ಲದೇ ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹೊಕ್ರಾಣಿ ಗ್ರಾಮದ ವ್ಯಕ್ತಿಯೊಬ್ಬನ ತಲೆಗೆ ಗಾಯವಾಗಿದೆ.
![Rain related incidents near vijapur](https://etvbharatimages.akamaized.net/etvbharat/prod-images/15492212_1110_15492212_1654587688828.png)
ಹಾಲಿ, ಮಾಜಿ ಶಾಸಕರು, ಅಧಿಕಾರಿಗಳ ಭೇಟಿ: ಭಾರಿ ಬಿರುಗಾಳಿ, ಮಳೆಯಿಂದ ಜಾತ್ರೆಯಲ್ಲಿ ಹಾಕಿದ್ದ ಅಂಗಡಿಕಾರರಿಗೆ ತೊಂದರೆ ಆಗಿದ್ದನ್ನು ಅರಿತ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ತಹಶೀಲ್ದಾರ್ ಬಿ.ಎಸ್.ಕಡಕಭಾವಿ, ಪ್ರಭಾರಿ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಶಿರಸ್ತೇದಾರ ವೀರೇಶ ತೊನಶ್ಯಾಳ ಸೇರಿದಂತೆ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲನ್ನು ಆಲಿಸಿದರು.
![Rain related incidents near vijapur](https://etvbharatimages.akamaized.net/etvbharat/prod-images/15492212_189_15492212_1654587656807.png)
ಶಾಸಕ ನಡಹಳ್ಳಿ ಮಾತನಾಡಿ, ಈ ಜಾತ್ರೆ ಸಾರ್ವಜನಿಕರ ದೇಣಿಗೆ ಸಂಗ್ರಹದ ಮೇಲೆ ನಡೆಯುತ್ತಿದೆ. ತೊಂದರೆಗೊಳಗಾದವರಿಗೆ ಸಹಾಯ ಮಾಡುವುದಾಗಿ ಸಮಿತಿಯವರು ತಿಳಿಸಿದ್ದಾರೆ. ನಾನು ಎರಡು ದಿನದಲ್ಲಿ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಸಹಾಯ ಹಸ್ತ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
![Rain related incidents near vijapur](https://etvbharatimages.akamaized.net/etvbharat/prod-images/15492212_152_15492212_1654587721066.png)
ಮಾನವೀಯತೆ ತೋರಿದ ಪುರಸಭೆ ಸದಸ್ಯೆ: ಮಳೆಯಿಂದ ತಮಗೆ ತಿನ್ನಲು ಆಹಾರ, ಉಡಲು ಬಟ್ಟೆ ಇಲ್ಲವೆಂದು ವಿಬಿಸಿ ಹೈಸ್ಕೂಲ್ ಮುಂದೆ ಹಸುಗೂಸು ಹೊತ್ತುಕೊಂಡು ರೋದಿಸುತ್ತಿದ್ದ ಮಹಾರಾಷ್ಟ್ರ ಮೂಲದ ಮಹಿಳೆಯ ಪರಿಸ್ಥಿತಿ ಕಂಡು ಮರುಗಿದ ಪುರಸಭೆ ಸದಸ್ಯೆ ಪ್ರೀತಿ ದೇಗಿನಾಳ ತಮ್ಮ ಮನೆಯಿಂದ ಹೊಸ ಬಟ್ಟೆ ತಂದುಕೊಟ್ಟು ಮಾನವೀಯತೆ ಮೆರೆದರು.