ವಿಜಯಪುರ: ನಗರದ ಎಪಿಎಂಸಿ ಕೃಷಿ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಈರುಳ್ಳಿ (ಉಳ್ಳಾಗಡ್ಡಿ) ಬಂದಿದ್ದು ದಿಢೀರ್ ಬೆಲೆ ಕುಸಿದಿದೆ. ಬೆಳೆಗಾರರು ಕಂಗಾಲಾಗಿದ್ದಾರೆ. ಮೇ ಎರಡನೇ ವಾರದಿಂದಲೂ ಬೆಲೆ ಏರಿಳಿತ ಆಗುತ್ತಲೇ ಇದೆ. ಬುಧವಾರ ಕ್ವಿಂಟಲ್ಗೆ 600 ರಿಂದ 700 ರೂ.ಗೆ ಇಳಿದಿದೆ.
2023ರ ಮಾರ್ಚ್ನಲ್ಲಿ ಮಾರುಕಟ್ಟೆಗೆ 10,429 ಕ್ವಿಂಟಲ್ ಈರುಳ್ಳಿ ಆವಕವಾಗಿದ್ದು ಗರಿಷ್ಠ ಬೆಲೆ 1,400 ರೂಪಾಯಿ ಇತ್ತು. ಏಪ್ರಿಲ್ನಲ್ಲಿ 13,053 ಕ್ವಿಂಟಲ್ ಆವಕವಾಗಿದ್ದು, ಕ್ವಿಂಟಲ್ಗೆ 1,000 ರೂ.ಗೆ ಇಳಿದಿದ್ದರೂ ರೈತರಿಗೆ ಇರುವ ದರದಲ್ಲಿಯೇ ಅನುಕೂಲವಾಗಿತ್ತು. ಆದರೆ, ಈಗ 600 ರಿಂದ 700 ರೂ. ಆಗಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಬೆಲೆ ಬರುವವರೆಗೆ ಕಾಯೋಣ ಎನ್ನಲೂ ಆಗುವುದಿಲ್ಲ. ಅನಿವಾರ್ಯವಾಗಿ ಮಧ್ಯವರ್ತಿಗಳು ಕೇಳಿದ ಬೆಲೆಗೆ ಕೊಟ್ಟು ಹೋಗುವ ಪರಿಸ್ಥಿತಿ ರೈತರದ್ದಾಗಿದೆ. ಕಳೆದ ವರ್ಷ ಮಾರ್ಚ್ನಲ್ಲಿ 13,911 ಕ್ವಿಂಟಲ್ ಆವಕವಾಗಿದ್ದು, ಗರಿಷ್ಠ ಬೆಲೆ ಕ್ವಿಂಟಲ್ಗೆ 2,500 ರೂ. ತನಕ ಹೋಗಿತ್ತು. ಏಪ್ರಿಲ್ನಲ್ಲಿ 13,814 ಕ್ವಿಂಟಲ್ ಆವಕವಾಗಿ ಕ್ವಿಂಟಲ್ಗೆ 1,400 ರೂ. ಇತ್ತು. ಈ ವರ್ಷ ಅಷ್ಟಾದರೂ ಬೆಲೆ ಬಂದರೆ ರೈತರಿಗೆ ಅನುಕೂಲವಾಗುತ್ತಿತ್ತು. ಸರ್ಕಾರ ಮಧ್ಯಪ್ರವೇಶಿಸಿ ಈರುಳ್ಳಿ ಬೆಲೆಗೆ ಉತ್ತಮ ಧಾರಣೆ ದೊರೆಯುವಂತೆ ನೋಡಿಕೊಳ್ಳಬೇಕಿದೆ. ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಲಿ ಎಂದು ನೊಂದ ರೈತರು ಒತ್ತಾಯಿಸಿದ್ದಾರೆ.
ಎಪಿಎಂಸಿ ಆಯುಕ್ತೆ ಶೈಲಜ ಎಂ.ವಿ ಮಾತನಾಡಿ, ವಿಜಯಪುರ ಎಪಿಎಂಸಿ ಕೃಷಿ ಮಾರುಕಟ್ಟೆಯಲ್ಲಿ ಪ್ರತಿ ಬುಧವಾರ ಹಾಗೂ ಭಾನುವಾರ ಈರುಳ್ಳಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಗುಣಮಟ್ಟದ ಈರುಳ್ಳಿ ಬೆಂಗಳೂರಿಗೆ ರವಾನೆಯಾದರೆ, ಮಧ್ಯಮ ಗುಣಮಟ್ಟದ ಈರುಳ್ಳಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಇದರ ಜೊತೆಗೆ ಪುಣೆಯಿಂದ ಗುಲಾಬಿ ಬಣ್ಣದ ಈರುಳ್ಳಿ ಆವಕವಾಗಿದೆ. ಪುಣೆ ಈರುಳ್ಳಿ ಅಧಿಕ ಪ್ರಮಾಣದಲ್ಲಿ ಆವಕವಾಗಿರುವುದು ಹಾಗೂ ಸ್ಥಳೀಯವಾಗಿ ಹೆಚ್ಚು ಈರುಳ್ಳಿ ಬೆಳೆದು ಮಾರುಕಟ್ಟೆಗೆ ಬಂದಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.
ವಿಜಯಪುರದ ಎಲ್ಲೆಡೆಯೂ ಈರುಳ್ಳಿ ಬೆಳೆಯುತ್ತಾರೆ. ಅದರಲ್ಲೂ ಬಸವನ ಬಾಗೇವಾಡಿಯಲ್ಲಿ ಅಧಿಕ ಪ್ರಮಾಣದ ಈರುಳ್ಳಿ ಬೆಳೆ ತೆಗೆಯುತ್ತಾರೆ. ಈ ಬಾರಿ ಬೆಳೆಗೆ ಪೂರಕ ವಾತಾವರಣ ಇದ್ದುದರಿಂದ ಕಳೆದ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 12,297 ಹೆಕ್ಟೇರ್ನಲ್ಲಿ ಈರುಳ್ಳಿಯನ್ನು ಬೆಳೆಯಲಾಗಿದೆ. ಪುಣೆಯಿಂದಲೂ ಗುಲಾಬಿ ಬಣ್ಣದ ಈರುಳ್ಳಿ ಬಂದಿರುವುದರಿಂದ ಬೇಡಿಕೆಗಿಂತ ಅಧಿಕವಾಗಿ ಈರುಳ್ಳಿ ಆವಕವಾಗಿದೆ. ಹೀಗಾಗಿ ಬೆಲೆ ಕುಸಿತ ಕಂಡಿದೆ ಎಂದು ಹೇಳಿದರು.
ಈರುಳ್ಳಿ ಬೆಳಗಾರ ಎಂ.ಜಿ.ಕುಲಕರ್ಣಿ ಪ್ರತಿಕ್ರಿಯಿಸಿ, ಈರುಳ್ಳಿ ಬೆಳೆಗಾರ ರೈತನ ಸ್ಥಿತಿ ಯಾವಾಗಲೂ ಸಂಕಷ್ಟದಲ್ಲೇ ಕಳೆಯುವಂತಾಗಿದೆ. ಈ ಬಾರಿ ಈರುಳ್ಳಿ ಉತ್ತಮ ಇಳುವರಿ ಬಂದಿದೆ. ಒಂದು ವಾರದ ಹಿಂದಿನ ದರ ದೊರಕಿದರೂ ನಮಗೆ ಅನುಕೂಲವಾಗುತ್ತಿತ್ತು. ಅದರೆ ಆವಕ ಹೆಚ್ಚಾಗಿದೆ ಎಂದು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಅನಿವಾರ್ಯವಾಗಿ ಮಾರುವಂತಾಗಿದೆ. ಸರ್ಕಾರ ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಇದನ್ನೂ ಓದಿ: ಕೆಜಿ ಎಲೆಕೋಸಿಗೆ 1 ರೂ.ಬೆಲೆ; ಐದು ಎಕರೆಯಲ್ಲಿದ್ದ ಬೆಳೆ ನಾಶ ಪಡಿಸಿದ ರೈತ