ಮುದ್ದೇಬಿಹಾಳ: ತಾಳಿಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಮ್ಮ ಸೋಲು ನಿಶ್ಚಿತವೆಂಬುದು ಗೊತ್ತಾಗಿ ಬಿಜೆಪಿಯ ಮುಗ್ಧ ಸ್ವಭಾವದ ಸದಸ್ಯ ರಾಮನಗೌಡ ಇಂಗಳಗಿ ಅವರನ್ನು ಕರೆದುಕೊಂಡು ತಮ್ಮ ಕೈಯನ್ನು ತಾವೇ ಸುಟ್ಟುಕೊಂಡಿದ್ದಾರೆಂದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಶಾಸಕ ನಡಹಳ್ಳಿ ಅವರ ಮೇಲೆ ನನಗೆ ನಂಬಿಕೆ ಇದೆ: ನಾನು ಯಾವಾಗಲೂ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದೇನೆ. ನಾನು ಕಾಂಗ್ರೆಸ್ ಸದಸ್ಯರ ಬಾಹ್ಯ ಬೆಂಬಲದಿಂದ ಅಧ್ಯಕ್ಷನಾದೆ. ಆದರೆ ನಾನು ಪಕ್ಷ ತ್ಯಜಿಸಿಲ್ಲ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಹೀಗಾಗಿ ಅವರ ಜೊತೆ ಸೇರಿಕೊಂಡು ಅವರ ಸಲಹೆಗಳಂತೆ ಮುಂದಿನ ದಿನಗಳಲ್ಲಿ ಎಪಿಎಂಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆಂದು ತಾಳಿಕೋಟಿ ಎಪಿಎಂಸಿ ಅಧ್ಯಕ್ಷ ರಾಮನಗೌಡ ಇಂಗಳಗಿ ಹೇಳಿದರು.
ನಾನು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ದಿಸಿ ಆಯ್ಕೆಗೊಂಡಿದ್ದೇನೆ. ಕಾಂಗ್ರೆಸ್ನವರು ನನಗೆ ಅಧ್ಯಕ್ಷನಾಗಲು ಬಾಹ್ಯ ಬೆಂಬಲ ನೀಡಿರಬಹುದು. ಆದರೆ ನಾನು ಕಾಂಗ್ರೆಸ್ ಪಕ್ಷದವನಲ್ಲ. ಬಿಜೆಪಿ ಪಕ್ಷದ ನಿಷ್ಠೆಯೊಂದಿಗೆ ಬೆಳೆದು ಬಂದಿರುವ ನಾನು, ಶಾಸಕ ನಡಹಳ್ಳಿ ಅವರ ಅನುಯಾಯಿಯಾಗಿ ಅವರ ಸಲಹೆ ಸೂಚನೆಗಳಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಅಭಿವೃದ್ಧಿಯ ಕಡೆಗೆ ಕೊಡೊಯುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಡಹಳ್ಳಿ, ಬಿಜೆಪಿ ಪಕ್ಷದ ಕಾರ್ಯಕರ್ತರು ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಳ್ಳುವುದಿಲ್ಲ. ಎಪಿಎಂಸಿಅಧ್ಯಕ್ಷರಾಗಿರುವ ರಾಮನಗೌಡ ಇಂಗಳಗಿ ಅವರು ಮೂಲತಃ ಬಿಜೆಪಿ ಪಕ್ಷದಿಂದಲೇ ಬಂದವರಾಗಿದ್ದಾರೆ. ಮುಂದೆಯೂ ಕೂಡ ಬಿಜೆಪಿ ಪಕ್ಷದಲ್ಲಿಯೇ ಮುಂದುವರೆಯಲು ನನ್ನ ಜೊತೆ ಇರಲಿದ್ದಾರೆ ಎಂದರು.