ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಗುರು ಶಂಕರಲಿಂಗೇಶ್ವರ ಜಾತ್ರೋತ್ಸವ ಅಂಗವಾಗಿ ಇಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಸರ್ವ ಧರ್ಮದ 31ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಂಥನಾಳದ ಪೂಜ್ಯ ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಬಡ ಕುಟುಂಬಗಳ ಕಷ್ಟಗಳನ್ನು ದೂರ ಮಾಡಲು 2005 ರಿಂದ ಮಠದಲ್ಲಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಬಡವರ ಸಂಕಷ್ಟಗಳನ್ನು ದೂರ ಮಾಡಲು ಮಠದ ವತಿಯಿಂದ ಶ್ರಮಿಸಲಾಗುತ್ತಿದೆ ಎಂದರು. ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲೇ ಮಠವನ್ನು ಮುನ್ನಡೆಸಲಾಗುತ್ತಿದೆ. ಇಂತಹ ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಯ ಜೀವನ ಸುಖ ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಆಶೀರ್ವದಿಸಿದರು.
ಹಳಿಂಗಳಿಯ ಶಿವಶರಣೆ ದ್ರಾಕ್ಷಾಯಿಣಿ ದೇವಿ ವಚನ ಪಠಣ ಮಾಡಿ ಅಕ್ಷತೆಯ ಕಾರ್ಯ ನೆರವೇರಿಸಿದರು. ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಜಕನೂರಿನ ಸಿದ್ಧಲಿಂಗ ದೇವರು, ಹಿಪ್ಪರಗಿಯ ಸಿದ್ಧಾರೂಢ ಶರಣರು, ಹಣಮಂತ ಮಹಾರಾಜರು, ಪುಂಡಲಿಂಗ ಮಹಾರಾಜರು, ಶರಣಬಸವ ದೇವರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಕಮರಿಮಠದ ಸೇವಾ ಸಮಿತಿಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.