ವಿಜಯಪುರ: ಹಿಂದಿ ಭಾಷೆ ಹೇರಿಕೆ ವಿಚಾರ ಸರಿಯಾದ ಕ್ರಮವಲ್ಲ. ಯಾವುದೇ ಒಂದು ಭಾಷೆಯನ್ನು ಹೇರುವಾಗ ಚರ್ಚೆ ಮಾಡಬೇಕು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲು ಕನ್ನಡ ಭಾಷೆ ಉಳಿಸಿ ಬೆಳೆಸಬೇಕು. ತ್ರಿ ಭಾಷಾ ನೀತಿ ಜಾರಿ ಕುರಿತು ವ್ಯಾಪಕವಾಗಿ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರ ನನಗೆ ಸಂಬಂಧಿಸಿದ್ದಲ್ಲ, ಅದು ಹೈ ಕಮಾಂಡ್ಗೆ ಬಿಟ್ಟದ್ದು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ದೆವೇಗೌಡರು ಈ ಕುರಿತು ಚರ್ಚಿಸುತ್ತಾರೆ. ರಾಜ್ಯದಲ್ಲಿ ಮೈತ್ರಿಯೇ ಸೋಲಿಗೆ ಕಾರಣ ಅನ್ನೋದನ್ನು ವೈಯಕ್ತಿಕವಾಗಿ ನಾನು ಒಪ್ಪುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಕೇಂದ್ರದಲ್ಲಿ ರಾಜ್ಯದ ಪ್ರಬಲ ಸಮುದಾಯದವರನ್ನು ಕಡೆಗಣಿಸಲಾಗ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲರು, ನಮ್ಮ ಸಮುದಾಯವೊಂದರಿಂದಲೇ 10 ಮಂದಿ ಸಂಸದರಾದರೂ ಕೂಡಾ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿ ಅವರು ನಾಲ್ಕು ಬಾರಿ ಜಯ ಗಳಿಸಿದ್ದಾರೆ. ಸುರೇಶ್ ಅಂಗಡಿಗೆ ರಾಜ್ಯ ಸಚಿವ ಸ್ಥಾನ ನಿಡಿದ್ದರೆ, ಪ್ರಹ್ಲಾದ್ ಜೋಶಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಇಬ್ಬರೂ ನಾಲ್ಕು ಬಾರಿ ವಿನ್ ಆದರೂ ಕೂಡಾ, ಸುರೇಶ್ ಅಂಗಡಿಯವರನ್ನು ನಿರ್ಲಕ್ಷಿಸಲಾಗಿದೆ. ಇದು ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂಬ ಸಚಿವ ಸುರೇಶ್ ಅಂಗಡಿ ಅವರ ಹೇಳಿಕೆಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಚಿವ ಪಾಟೀಲ್ ಅವರು, ಮೊದಲು ತಮ್ಮ ಖಾತೆ ಕುರಿತು ಚಿಂತೆ ಮಾಡಲಿ. ಅಂಗಡಿಯವರಿಗೆ ಸ್ವಾಭಿಮಾನ ಇದ್ದರೆ ತಮ್ಮ ಸ್ಥಾನವನ್ನು ತಿರಸ್ಕರಿಸಲಿ. ನನಗೇನಾದರೂ ಹೀಗೆ ಆಗಿದ್ದರೆ ಖಂಡಿತವಾಗಿಯೂ ತಿರಸ್ಕರಿಸುತ್ತಿದ್ದೆ ಎಂದು ತಿರುಗೇಟು ನೀಡಿದರು.