ವಿಜಯಪುರ: ನಗರದಲ್ಲಿ ಕೈಗೊಂಡ ಅಭಿವೃದ್ಧಿ ನೋಡದೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿದ್ದಾರೆ. ಶಾಸಕ ಯತ್ನಾಳ ನಗರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಾಜಿ ಸಚಿವರು ಈ ರೀತಿಯಾಗಿ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದು ಮಾಜಿ ಮೇಯರ್ ಸಂಗೀತಾ ಗುಡುಗಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆರು ತಿಂಗಳಲ್ಲಿ ನಮ್ಮ ಶಾಸಕರು ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ನಾನು ತೋರಿಸಿ ಕೊಡುತ್ತೇನೆ ಎಂದು ಸವಾಲು ಎಸೆದರು.
ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಆದರೆ, ಯತ್ನಾಳ ಅವರು ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಎಂದು ಹೇಳುವುದು ತಪ್ಪು. ನೆರೆ ಸಂತ್ರಸ್ತರಿಗೆ ಸಿದ್ದೇಶ್ವರ ಸಂಸ್ಥೆಯಿಂದ ಅಗತ್ಯ ನೆರವು ನೀಡಿದ್ದಾರೆ. ಅನೇಕ ನಿರುದ್ಯೋಗಿಗಳಿಗೆ ಶಾಸಕ ಯತ್ನಾಳ ಅವರು ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ ಎಂದು ಮಾಜಿ ಉಪ ಮೇಯರ್ ಲಕ್ಷ್ಮೀ ಕನ್ನೋಳಿ ತಿಳಿಸಿದರು.