ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಬೇಕೆಂಬ ಆ ಭಾಗದ ಶಾಸಕರ ಬೇಡಿಕೆಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅಂಥವರನ್ನ ಸೋಲಿಸಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಈ ಮೂಲಕ ಆ ಭಾಗದಲ್ಲಿ ಬಿಜೆಪಿ ಬಲ ಪಡಿಸಲು ಅನುಕೂಲವಾಗುತ್ತೆ. ಶಾಸಕರಾದ ರಾಜುಗೌಡ ಮತ್ತು ದತ್ತಾತ್ರೇಯ ಪಾಟೀಲ ರೇವೂರ ಅವರ ಭಾವನೆಗಳಿಗೆ ಸ್ಪಂದಿಸಬೇಕು. ಅವರ ಬೇಡಿಕೆಗೆ ನನ್ನ ಬೆಂಬಲವಿದೆ ಎಂದರು.
ಸಚಿವ ಸ್ಥಾನ ವಂಚಿತ ಜಿಲ್ಲೆಗಳಿಗೂ ಸ್ಥಾನಮಾನ ನೀಡಬೇಕು. ಅದಕ್ಕಾಗಿ ಕೆಲವರು ತ್ಯಾಗ ಮಾಡಲೇಬೇಕು. ಸಿ ಪಿ ಯೋಗೇಶ್ವರ್,ರಮೇಶ್ ಜಾರಕಿಹೊಳಿ ಅವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಹಳಷ್ಟು ಸಚಿವರು ಸರ್ಕಾರ ರಚನೆಗೂ ಮುಂಚೆ ಮೊದಲು ಸರ್ಕಾರ ರಚಿಸಿ ನಾವು ಸಚಿವ ಸ್ಥಾನ ಕೇಳುವುದಿಲ್ಲ ಎಂದಿದ್ದರು. ಈಗ ಅಂಥವರು ಸಿಎಂ ಬಳಿಗೆ ತೆರಳಿ ಸಚಿವ ಸ್ಥಾನ ಬಿಡುವುದಾಗಿ ಹೇಳಬೇಕು ಎಂದರು.
ಅಸಮಾಧಾನ ಹೊಂದಿರುವ ಶಾಸಕರು ಸಭೆ ನಡೆಸುವುದರಲ್ಲಿ ತಪ್ಪಿಲ್ಲ. ಎಲ್ಲರೂ ಒಂದು ಕಡೆ ಸೇರಿ ಚರ್ಚಿಸುವುದು ಭಿನ್ನಮತ ಮತ್ತು ಅತೃಪ್ತಿಯಲ್ಲ. ಸಿಎಂ ಮೇಲೆ ಆ ಭಾಗದ ಜನರ ಭಾವನೆಗಳನ್ನ ತಿಳಿಸಲು ಒತ್ತಡ ಹೇರುವುದು ತಪ್ಪಲ್ಲ ಎಂದರು.
ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಕುಮಟಳ್ಳಿ ಅವರಿಗೆ ರಾಜೀನಾಮೆ ಅವಶ್ಯವಿರಲಿಲ್ಲ. ಆದರೂ ಯಡಿಯೂರಪ್ಪ ಸಿಎಂ ಆಗಲಿ,ಸರ್ಕಾರ ಬರಲಿ ಮತ್ತು ರಮೇಶ್ ಜಾರಕಿಹೊಳಿ ಅವರಿಗೆ ಆಗುತ್ತಿದ್ದ ಅನ್ಯಾಯ ಪ್ರತಿಭಟಿಸಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸಂದರ್ಭದಲ್ಲಿ ಸಿಎಂ ಆಶ್ವಾಸನೆ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಸಿಎಂ ಆಶ್ವಾಸನೆ ಕೊಟ್ಟಿದ್ದರೆ ಅದನ್ನು ಈಡೇರಿಸಲಿ ಎಂದರು.
ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಅನಂತಕುಮಾರ ಅವರ ಹೇಳಿಕೆಯನ್ನ ನಾನು ಸಂಪೂರ್ಣವಾಗಿ ನೋಡಿಲ್ಲ ಎಂದರು. ವಿಜಯಪುರ ಸಂಸದ ರಮೇಶ್ ಅವರು ನಾನು ನಾಯಕ ಅಲ್ಲ ಎನ್ನಲು ಅವರ್ಯಾರು? ಅವರ ಸರ್ಟಿಫಿಕೇಟ್ನಿಂದ ನಾನೇನು ಶಾಸಕ,ಸಂಸದನಾಗಿಲ್ಲ. ಈವರೆಗೆ ವಿಜಯಪುರ ಜಿಲ್ಲೆಯಲ್ಲಿ ನಾನು ಮಾಡಿದ ಕೆಲಸಗಳ ಬೋರ್ಡ್ ಹೆಸರಿವೆ. ಜಿಗಜಿಣಗಿ 15 ವರ್ಷಗಳಲ್ಲಿ ಎಲ್ಲಿ ಕೆಲಸ ಮಾಡಿದ್ದಾರೆ ಎಂಬುದರ ಬೋರ್ಡ್ ತೋರಿಸಲಿ ಎಂದು ಸ್ವಪಕ್ಷದ ಹಿರಿಯ ನಾಯಕನಿಗೆ ಯತ್ನಾಳ್ ಸವಾಲು ಹಾಕಿದರು.