ವಿಜಯಪುರ: ಕಡೆ ಶ್ರಾವಣ ಶುಕ್ರವಾರವನ್ನು ಸಂಭ್ರಮದಿಂದ ಆಚರಿಸಲೆಂದು ಖಾಸಗಿ ಬಸ್ ಏರಿ ಹೊರಟಿದ್ದ ಕುಟುಂಬವೊಂದು ದಾರುಣ ದುರಂತಕ್ಕೀಡಾಗಿದೆ. ವಿಜಯಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಚಿತ್ರದುರ್ಗದ ಸಮೀಪ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ, ಐವರು ಸಜೀವ ದಹನವಾಗಿದ್ದಾರೆ.
ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಕ್ಕೆಶ್ರೀ ಖಾಸಗಿ ಬಸ್ ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಶೀಲಾ ರವಿ ಪಡಕೋಟೆ (33), ಆಕೆಯ ಮಕ್ಕಳಾದ ಸ್ಪರ್ಶ (8), ಸಮೃದ್ಧ (5) ಹಾಗೂ ಶೀಲಾ ಸಹೋದರಿ ಕವಿತಾ ವಿನಾಯಕ (29), ಆಕೆಯ ಮಗಳು ನಿಶ್ಚಿತಾ (3) ಸಾವಿಗೀಡಾಗಿದ್ದಾರೆ.
ಇವರೆಲ್ಲರೂ ಮಂಗಳವಾರ ರಾತ್ರಿ 9-20ರ ಸಮಯಕ್ಕೆ ವಿಜಯಪುರ ಜಿಲ್ಲೆಯ ಗಣೇಶ ನಗರದಲ್ಲಿ ಬಸ್ ಹತ್ತಿದ್ದು, ಪ್ರಯಾಣದ ದೃಶ್ಯ ಪಕ್ಕದ ಕಿರಾಣಿ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಪತಿಯಂದಿರನ್ನು ಸೇರಲು ಅಕ್ಕ-ತಂಗಿ ತಮ್ಮ ಪುಟ್ಟ ಮಕ್ಕಳ ಜೊತೆ ಹೋಗುತ್ತಿದ್ದರು. ಇದರಿಂದ ಶೀಲಾಳ ಪತಿ ರವಿಯವರ ಹುಟ್ಟೂರಾದ ಹಿಟ್ಟನಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಕೊರೊನಾ ಲಾಕ್ಡೌನ್ ಜಾರಿಯಾಗುವ ಮುನ್ನವೇ ಶೀಲಾ ಹಾಗೂ ಸಹೋದರಿ ಕವಿತಾ ತಮ್ಮ ಮಕ್ಕಳೊಂದಿಗೆ ವಿಜಯಪುರ ಸೇರಿದ್ದರು. ಶ್ರಾವಣ ಮಾಸ ಮುಗಿಯುತ್ತಾ ಬಂದಿದ್ದು, ಲಾಕ್ಡೌನ್ ಸಹ ಸಡಿಲಿಕೆಯಾದ ಕಾರಣ, ಕಡೆ ಶ್ರಾವಣ ಶುಕ್ರವಾರದ ಲಕ್ಷ್ಮೀ ಪೂಜೆಯನ್ನು ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲು ಹೊರಟಿದ್ದರು ಎಂಬ ಮಾಹಿತಿ ದೊರೆತಿದೆ.