ವಿಜಯಪುರ: 2014ರ ಮೇ 26 ರಂದು ವಿಜಯಪುರದ ಗಾಂಧಿ ಚೌಕ್ ಬಳಿಯ ಹಣ್ಣಿನ ಮಾರುಕಟ್ಟೆ ಬಳಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಎಲ್ಲ 134 ಆರೋಪಿಗಳನ್ನು ಖುಲಾಸೆಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಿದೆ.
ಇಂದು ವಿಡಿಯೋ ಸಂವಾದ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದಾರೆ. ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಸವೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್ ವರೆಗೆ ವಿಜಯೋತ್ಸವ ಆಚರಿಸಲಾಗುತ್ತಿತ್ತು.
ಈ ವೇಳೆ ಗಾಂಧಿ ಚೌಕ್ ಬಳಿಯ ಮಾರುಕಟ್ಟೆಯಲ್ಲಿ ಗಲಭೆ ನಡೆದಿತ್ತು. ಈ ಗಲಾಟೆ ಕೋಮು ಗಲಭೆಯಾಗಿ ತಿರುವು ಪಡೆದಿತ್ತು. ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದು, ಬೈಕ್ ಹಾಗೂ ಇತರೆ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣ ನಡೆದು ಸುಮಾರು 7 ವರ್ಷಗಳ ನಂತರ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ಎಸ್ಪಿ ಕಚೇರಿಯ ಹಿಂಭಾಗದ ಚಿಂತನ ಹಾಲ್ನಲ್ಲಿ ನಡೆದ ವಿಡಿಯೋ ಸಂವಾದ ಮೂಲಕ ನ್ಯಾಯಾಧೀಶ ಡಿ. ಜಯಂತ ಕುಮಾರ, ಪೊಲೀಸರು ಗಲಭೆ ವೇಳೆ 134 ಜನರ ವಿರುದ್ದ 884/18 ಹಾಗೂ 885/18 ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ಹಲವು ವರ್ಷಗಳಿಂದ ನಡೆದಿತ್ತು. ಇಂದು ಎಲ್ಲರೂ ನಿರಪರಾಧಿಗಳೆಂದು ತೀರ್ಪು ನೀಡಿದ್ದಾರೆ.
ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಬಹುತೇಕ ಪ್ರಕರಣ ದಾಖಲಾಗಿದ್ದವರು ಹಾಜರಾಗಿದ್ದರು. ತೀರ್ಪು ಹೊರ ಬೀಳುತ್ತಿದ್ದಂತೆ ಉಭಯ ಸಮುದಾಯದವರು ಪರಸ್ಪರ ಸಂತಸ ಹಂಚಿಕೊಂಡರು. ಕೆಲ ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಅಮಾಯಕರು ಸಂಕಷ್ಟ ಅನುಭವಿಸಬೇಕಾಯಿತು. ಮುಂದೆ ಇಂಥ ಅವಘಡಗಳು ನಡೆದಂತೆ ಎರಡು ಸಮುದಾಯ ಎಚ್ಚರಿಕೆ ವಹಿಸಲಿದೆ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ: ಬೆಳಗಾವಿ : ನ್ಯಾಯಾಲಯದ ಆವರಣದಲ್ಲೇ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ..