ವಿಜಯಪುರ: ತಳವಾರ ಮತ್ತು ಪರಿವಾರ ಜಾತಿಗಳಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡಬೇಕೆಂದು ಸಮಾಜದ ಮುಖಂಡರು ಹಾಗೂ ಜನರು ಆದಿ ಮಾನವರ ವೇಷ ತೊಟ್ಟು ನಗರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
![Exciting protest for Scheduled Caste Certificate](https://etvbharatimages.akamaized.net/etvbharat/prod-images/kn-vjp-04-excitng-portest-avbb-7202140_31082020171442_3108f_01915_409.jpg)
ನಗರದ ಹೊರವಲಯದ ಸಿಂದಗಿ ನಾಕಾದಿಂದ ಆದಿಮಾನವ ವೇಷ ತೊಟ್ಟು ಪ್ರತಿಭಟನಾ ಮೆರವಣಿಗೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಬೇಕಾಗಿತ್ತು. ಆದರೆ, ಕೋವಿಡ್ ನಿಯಮ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಡಳಿತ ಅವರನ್ನು ದರಬಾರ್ ಮೈದಾನದವರೆಗೆ ಮಾತ್ರ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ನೀಡಿ ಮೈದಾನದಲ್ಲಿ ಸೇರಿಸಲಾಯಿತು. ಮಧ್ಯಾಹ್ನದ ವೇಳೆ ಖುದ್ದು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ, ಎಸ್ಪಿ ಅನುಪಮ್ ಅಗರವಾಲ್ ಭೇಟಿ ನೀಡಿದರು.
ಈ ವೇಳೆ ತಳವಾರ ಹಾಗೂ ಪರಿವಾರ ಸಮಾಜದ ಮುಖಂಡ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ತಮ್ಮ ಸಮಾಜಕ್ಕೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದೆ. ಸದ್ಯದಲ್ಲೆ ಶಾಲೆ ಪ್ರಾರಂಭವಾಗಲಿವೆ. ಈ ವೇಳೆ ನಮ್ಮ ಮಕ್ಕಳು ಜಾತಿ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ. ಇದೇ ರೀತಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಈಗ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗಿದೆ. ಮುಂದೆ ಬೆತ್ತಲೆ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಸಿದರು.
![Exciting protest for Scheduled Caste Certificate](https://etvbharatimages.akamaized.net/etvbharat/prod-images/kn-vjp-04-excitng-portest-avbb-7202140_31082020171437_3108f_01915_817.jpg)
ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮುಖಂಡರು ಸರ್ಕಾರ ಶೀಘ್ರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧವಿರುವುದಾಗಿ ಎಚ್ಚರಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ, ತಮ್ಮ ಬೇಡಿಕೆಯ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಕೋವಿಡ್ ಇರುವ ಕಾರಣ ಈ ರೀತಿ ಗುಂಪು ಸೇರಬಾರದು, ತಕ್ಷಣ ಪ್ರತಿಭಟನೆ ಕೈಬಿಟ್ಟು ಹೋಗುವಂತೆ ಮನವಿ ಮಾಡಿದರು.