ಮುದ್ದೇಬಿಹಾಳ : ಕಳೆದ ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಬೃಹತ್ ಮೊಸಳೆಯನ್ನು ಶನಿವಾರ ಸತತ ಎಂಟು ತಾಸು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೊಸಳೆ ಹಿಡಿಯುವ ಪರಿಣತರ ತಂಡ ಯಶಸ್ವಿಯಾಗಿದೆ.
ತಾಲೂಕಿನ ನಾಲತವಾಡ ರೈತ ರಾಯಪ್ಪ ವಾಲಿ ಎಂಬುವರ ಜಮೀನಿನಲ್ಲಿ ಇದ್ದ ಬಾವಿಯಲ್ಲಿ ಬೃಹತ್ ಮೊಸಳೆ ಅಡಗಿಕೊಂಡಿತ್ತು. ಜಮೀನಿನ ಮಾಲೀಕ ಹಾಗೂ ಪಕ್ಕದ ಜಮೀನಿನವರು ಭಯದಲ್ಲೇ ಕೆಲಸಕ್ಕೆ ಹೋಗಬೇಕಾಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮೊಸಳೆ ಸೆರೆ ಹಿಡಿಯುವ ಪರಿಣತರಾದ ನಾಗೇಶ ವಡ್ಡರ ಹಾಗೂ ಸ್ಥಳೀಯ ರೈತರ ನೆರವಿನಿಂದ ಬಾವಿಯಲ್ಲಿರುವ ನೀರು ಖಾಲಿ ಮಾಡಿ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಸಧ್ಯ ಮೊಸಳೆಯನ್ನು ಕೃಷ್ಣಾ ನದಿ ಹಿನ್ನೀರಿನಲ್ಲಿ ಬಿಡಲಾಯಿತು. ಅರಣ್ಯ ಇಲಾಖೆಯ ಅಧಿಕಾರಿ ರಾಜೀವ ಬಿರಾದಾರ ಮಾರ್ಗದರ್ಶನದಲ್ಲಿ ಎಂ.ಎಚ್. ತೇಲಿ, ವಿಶ್ವೇಶ್ವರಯ್ಯ ಹಿರೇಮಠ, ರಮೇಶ ಮೆಟಗುಡ್ಡ, ನಾಲತವಾಡ ಹೊರಠಾಣೆಯ ಸಿಬ್ಬಂದಿ ಜಿ.ಟಿ. ಗೆಣ್ಣೂರ, ರವಿ ವಿಜಾಪೂರ ಹಾಗೂ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.