ವಿಜಯಪುರ : ಜಿಲ್ಲೆಯಲ್ಲಿ ಮತ್ತೊಂದು ಜೋಡಿ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಯುವಕ ಹಾಗೂ ಅಪ್ರಾಪ್ತೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಸಲಾದಹಳ್ಳಿ ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ(19) ಹಾಗೂ ಖಾನಾಪುರ ಗ್ರಾಮದ 16 ವರ್ಷದ ಅಪ್ರಾಪ್ತೆ ಕೊಲೆಯಾದವರು ಎಂದು ಗುರುತಿಸಲಾಗಿದೆ. ಬಸವರಾಜ ಹಾಗೂ ಅಪ್ರಾಪ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
ಅಪ್ರಾಪ್ತೆಯ ಮನೆಯಲ್ಲಿ ವಿಷಯ ತಿಳಿದಿದ್ದರಿಂದ ಇದಕ್ಕೆ ವಿರೋಧವಿತ್ತು. ಅಲ್ಲದೆ ಹುಡುಗ ಬೇರೆ ಜಾತಿಯವನು ಎಂಬುದಕ್ಕೆ ಈ ಮದುವೆಗೆ ಅಡ್ಡಿಯಾಗಿತ್ತು ಎನ್ನಲಾಗಿದೆ. ಇದೇ ವೇಳೆ ಇಬ್ಬರು ಒಂದೆಡೆ ಭೇಟಿಯಾಗಿದ್ದನ್ನ ಕಂಡ ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಅಪ್ರಾಪ್ತೆಯ ತಂದೆಯ ಮೇಲೆ ಕೊಲೆ ಶಂಕೆ!?
ಅನ್ಯ ಜಾತಿ ಯುವಕನ ಜೊತೆ ಮಗಳು ಇರುವುದನ್ನು ಕಂಡು ತಂದೆಯೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸಲಾದಹಳ್ಳಿ ಹಾಗೂ ಖಾನಾಪುರ ಅಕ್ಕಪಕ್ಕದ ಗ್ರಾಮಗಳಾಗಿದ್ದರಿಂದ ಇಬ್ಬರಿಗೂ ಪರಿಚಯವಾಗಿತ್ತು. ಇದೇ ಪರಿಚಯ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಕಲಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಅನೈತಿಕ ಸಂಬಂಧ: ವಿಷ ಕುಡಿದ ಇಬ್ಬರಲ್ಲಿ ಮಹಿಳೆ ಸಾವು, ಪುರುಷನ ಸ್ಥಿತಿ ಗಂಭೀರ..