ವಿಜಯಪುರ: ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಅವಲೋಕಿಸಲು ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದು, ಇಲ್ಲಿ ಸಹಜವಾಗಿಯೇ ಸಿಎಂ ಬಿಎಸ್ವೈ ಕೃಷ್ಣೆಗೆ ಬಾಗಿನ ಅರ್ಪಿಸುತ್ತಾರಾ ಎಂಬ ಗೊಂದಲ ಜಿಲ್ಲೆಯ ಜನತೆ ಹಾಗೂ ಅಧಿಕಾರಿ ವರ್ಗದಲ್ಲಿ ಮೂಡಿದೆ.
ಸಿಎಂ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಬಾಗಿನ ಅರ್ಪಣೆ ಮಾಹಿತಿ ಇಲ್ಲದಿದ್ದರೂ, ಅಧಿಕಾರಿಗಳು ಮಾತ್ರ ಬಾಗಿನ ಅರ್ಪಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ 2019ರ ಅಕ್ಟೋಬರ್ 5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃಷ್ಣಾ ನದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ಈ ಅವಕಾಶ ಒದಗಿಬಂದಿತ್ತು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ, ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಸುದೈವ ಒದಗಿ ಬಂದಿತ್ತು. ಆದರೆ ದುರಾದೃಷ್ಟ ಹವಾಮಾನ ವೈಪರೀತ್ಯದಿಂದ ಬೆಳಗಾವಿಯವರೆಗೆ ಆಗಮಿಸಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾದು, ಆಲಮಟ್ಟಿಗೆ ಬರದೇ ಅವರು ವಾಪಸ್ ಬೆಂಗಳೂರಿಗೆ ತೆರಳಿದ್ದರು.
ಆಗಲೇ ರಾಜ್ಯ ರಾಜಕೀಯದಲ್ಲಿ ಗುಸು ಗುಸು ಆರಂಭವಾಗಿತ್ತು. ಇದೊಂದು ಅಪಶಕುನದ ಸಂಕೇತ ಎಂದಲ್ಲಾ ವಿಶ್ಲೇಷಣೆಗಳು ನಡೆದಿದ್ದವು. ಅದು ಮುಂದೆ ಕಾಕತಾಳಿಯ ಎಂಬಂತೆ ಸಮ್ಮಿಶ್ರ ಸರ್ಕಾರ ಪತನವಾಗಿತ್ತು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಈಗ ಇತಿಹಾಸ.
ಇದೇ ಅವಧಿಯಲ್ಲಿ ಸಿಎಂ ಬಿಎಸ್ವೈಗೆ ಎರಡನೇ ಬಾರಿ ಕೃಷ್ಣೆಗೆ ಬಾಗಿನ ಅರ್ಪಿಸುವ ಭಾಗ್ಯ ಒದಗಿ ಬಂದಿದೆ. ಆದರೆ ಅಧಿಕೃತ ವೇಳಾಪಟ್ಟಿಯಲ್ಲಿ ಇಲ್ಲದಿದ್ದರೂ, ಮನಸ್ಸು ಬದಲಿಸಿ ಬಾಗಿನ ಅರ್ಪಿಸಲು ಮುಂದಾದರೆ ಎಂದು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.
ನಾಳೆ ಸಿಎಂ ಬೆಳಗಾವಿಯಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಆಲಮಟ್ಟಿಗೆ ಆಗಮಿಸಿ, ಜಲಾಶಯವನ್ನು ವೀಕ್ಷಿಸಲಿದ್ದಾರೆ. ನಂತರ ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಂಡಿದೆ.
ಎರಡು ಗಂಟೆಯವರೆಗೆ ಆಲಮಟ್ಟಿಯಲ್ಲಿ ಸಿಎಂ ಇರುವ ಕಾರಣ ಅವರು ಭೇಟಿ ನೀಡುವ ಸ್ಥಳಗಳಲ್ಲಿ ವೈದ್ಯಕೀಯ ತಂಡ ಇರಲಿದ್ದು, ಹೆಲಿಕಾಪ್ಟರ್ನಿಂದ ಇಳಿದ ಬಳಿಕ ಥರ್ಮಲ್ ಸ್ಕ್ರೀನಿಂಗ್ಗೆ ಸಿಎಂ ಒಳಗಾಗಲಿದ್ದಾರೆ. ಜತೆಗೆ ಸಿಎಂ ಅವರಿಗೆ ಅಡುಗೆ ತಯಾರಿಸುವರು, ಊಟ ಬಡಿಸುವರನ್ನು ಸಹ ಱಪಿಡ್ ಟೆಸ್ಟ್ಗೆ ಒಳಗಾಗಲಿದ್ದಾರೆ.
ವಾರದ ಹಿಂದೆಯೇ ಸಿಎಂ ಯಡಿಯೂರಪ್ಪ ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದರು. ಇಲ್ಲಿಯೂ ಕೃಷ್ಣೆಗೆ ಬಾಗಿನ ಅರ್ಪಿಸುತ್ತಾರೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ. ನಾಳೆ ಆಲಮಟ್ಟಿಗೆ ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿ, ಮನವಿ ಸಲ್ಲಿಸುವುದು, ಯಾವುದೇ ರೀತಿಯ ಪ್ರತಿಭಟನೆಗೆ ನಿರ್ಬಂಧ ಹೇರಲಾಗಿದೆ. ಮುಖ್ಯಮಂತ್ರಿಗಳ ಭದ್ರತೆಗೆ ವಿಜಯಪುರ, ಬಾಗಲಕೋಟೆ ಪೊಲೀಸರು ಸಜ್ಜಾಗಿದ್ದಾರೆ.