ವಿಜಯಪುರ : ಸರ್ಕಾರ ರಾಜ್ಯದ ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು. ಜಿಲ್ಲೆಯ ಇಂಡಿ ಹೊರ ವಲಯದಲ್ಲಿ 1.58 ಕೋಟಿ ರೂ. ವೆಚ್ಚದ ಕೃಷಿ ವಿಜ್ಞಾನ ಕೇಂದ್ರ ಆಡಳಿತ ಭವನದ ಉದ್ಘಾಟನಾ ಸಮಾರಂಭ ಮತ್ತು ಜಿಲ್ಲಾ ಪಂಚಾಯತ್ ವಿಜಯಪುರ, ಕೃಷಿ ಇಲಾಖೆ ಇಂಡಿ, ರೈತ ಸಂಪರ್ಕ ಕೇಂದ್ರ ಬಳ್ಳೊಳ್ಳಿ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಸಮಸ್ಯೆಗಳನ್ನ ಆಲಿಸಲು ರೈತರೊಂದಿಗೆ ಒಂದು ದಿನ ಎಂಬ ಯೋಜನೆ ಹಾಕಿಕೊಂಡಿದೆ. ಇದು ರೈತರ ಕಾರ್ಯಕ್ರಮವಾಗಿದೆ. ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ರೂಪಿಸಲಾಗಿರುವ ಕಾರ್ಯಕ್ರಮ.
ಸರ್ಕಾರವನ್ನು ರೈತರ ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವ ನಾಡು ವಿಜಯಪುರ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.

ಗಡಿ ಭಾಗದ ರೈತರು ವೈಜ್ಞಾನಿಕ, ಸಮಗ್ರ, ಸಾವಯವ ಕೃಷಿ ನೀತಿ ಅಳವಡಿಸಿಕೊಳ್ಳಿ. ಸಾಂಪ್ರದಾಯಿಕ ಕೃಷಿ ಮಾಡಿ, ರಾಸಾಯನಿಕ ಗೊಬ್ಬರ ಬಳಕೆ ತ್ಯಜಿಸಿ, ಭೂಮಿಯ ಫಲವತ್ತತೆ ಕಾಪಾಡಿ ಎಂದು ತಿಳಿಸಿದ ಅವರು, ಪ್ರತಿ ಗ್ರಾಮದಲ್ಲಿ ಒಂದು ಮಣ್ಣು ಪರೀಕ್ಷೆ ಕೇಂದ್ರ ಮಾಡುವ ಕನಸು ಪ್ರಧಾನಿಗಳದ್ದಾಗಿದೆ.
ಅದರಂತೆ ಸ್ವಾಭಿಮಾನಿ ರೈತ ಎಂಬ ಕಾರ್ಡ್ನ ಸರ್ಕಾರ ಜಾರಿಗೆ ತಂದಿದೆ. ನಾನು ಭಾರತ ದೇಶದ ರೈತ ಎಂದು ಹೆಮ್ಮೆಯಿಂದ ಹೇಳಲು ನಮ್ಮ ರೈತರಿಗೆ ಇದು ಸಹಾಯಕವಾಗುತ್ತದೆ ಎಂದರು.

ರೈತರು ಹೊಸ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು. ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಅದರಂತೆ ಅಧಿಕಾರಿಗಳು ಕೂಡ ರೈತ ಸ್ನೇಹಿಯಾಗಿರಬೇಕು, ಅಧಿಕಾರಿಗಳು ರೈತರ ಹಿತ ಕಾಪಾಡಬೇಕು ಎಂದರು.
ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ವಿಜುಗೌಡ ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕಳ್ಳಿಮನಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಉಪಸ್ಥಿತರಿದ್ದರು.