ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂದು ಸಿಫಾ ಆಸ್ಪತ್ರೆ ಹಾಗೂ ಕಿರಾಣಾ ಬಜಾರ್ ಪ್ರದೇಶದಲ್ಲಿ ಜಿಲ್ಲಾಡಳಿತ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಿ ಬ್ಯಾರಿಕೇಡ್ ಹಾಕಿರೋದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಇಂದಿನವರೆಗೂ 39 ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಇದರಲ್ಲಿ 2 ಸಾವಾಗಿದೆ. ನಗರದಲ್ಲಿ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿರಲಿಲ್ಲ. ಭಾನುವಾರ ಜಿಲ್ಲೆಯಲ್ಲಿ ಪ್ರಥಮವಾಗಿ ಸೋಂಕು ತಗುಲಿದ 60 ವರ್ಷದ ಮಹಿಳೆಯನ್ನು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇನ್ನೇನು ನಗರ ಸಹಜ ಸ್ಥಿತಿಯತ್ತ ದಾಪುಗಾಲು ಹಾಕುತ್ತದೆ ಎಂದು ಭಾವಿಸಿದ್ದ ಜನರಿಗೆ ಮತ್ತೊಂದು ಬಡಾವಣೆಗೆ ಜಿಲ್ಲಾಡಳಿತ ಬ್ಯಾರಿಕೇಡ್ನಿಂದ ರಸ್ತೆಗಳನ್ನು ಬಂದ್ ಮಾಡಿರೋದು ನಗರ ನಿವಾಸಿಗಳನ್ನು ಆತಂಕಕ್ಕೆ ದೂಡಿದೆ.
ಇನ್ನು ಬಸವೇಶ್ವರ ವೃತ್ತದ ಹಿಂಭಾಗದ ಸಿಫಾ ಆಸ್ಪತ್ರೆ ಏರಿಯಾ ಮತ್ತು ಕಿರಾಣಾ ಬಜಾರ್ ಇಂದು ಬೆಳಗ್ಗೆ ಏಕಾಏಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿರೋದು ಜನರಿಗೆ ಮತ್ತೊಂದು ಆತಂಕ ಮೂಡಿಸಿದೆ. ನಗರದಲ್ಲಿ ಸೀಲ್ ಡೌನ್ ಆಗಿರುವ ಎರಡನೇ ಬಡಾವಣೆ ಇದಾಗಿದೆ.