ವಿಜಯಪುರ : ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ ಶಾಸ್ತ್ರಿ (ಆಲಮಟ್ಟಿ) ಜಲಾಶಯದಲ್ಲಿ ಒಳಹರಿವು ಪ್ರಮಾಣ ಯಥಾಸ್ಥಿತಿ ಕಾಪಾಡಿಕೊಂಡು ಬರಲಾಗುತ್ತಿದೆ. ಹೊರಹರಿವು ಸಹ ನಿಯಂತ್ರಣ ಮಟ್ಟದಲ್ಲಿ ಬಿಡಲಾಗುತ್ತಿದೆ. ಶನಿವಾರ ಬೆಳಗ್ಗೆಯವರೆಗೆ 517.81 ಮೀಟರ್ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಸದ್ಯ 95.081 ಟಿಎಂಸಿ ನೀರು ಶೇಖರಣೆಯಾಗಿದೆ.
ಇಂದು 1,51,598 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದರೆ. 1,75,672 ಲಕ್ಷ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಶುಕ್ರವಾರ ಸಂಜೆಯವರೆಗೆ ಒಳಹರಿವು 1,41,000 ಲಕ್ಷ ಕ್ಯೂಸೆಕ್ ಸಂಗ್ರಹವಾಗಿತ್ತು. ಹೊರಹರಿವು 1,80,000 ಲಕ್ಷ ಕ್ಯೂಸೆಕ್ ನೀರು ಹೊರಗೆ ಬಿಡಲಾಗಿತ್ತು. ಕಳೆದ ಎರಡು ದಿನಗಳಿಂದ ಜಲಾಶಯದ ಎಲ್ಲ 26 ಕ್ರೆಸ್ಟ್ ಮೂಲಕ ನೀರು ಹೊರಬಿಡಲಾಗುತ್ತಿದೆ. ಶನಿವಾರ ಒಳಹರಿವು 10 ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿದ್ರೆ, 5 ಸಾವಿರ ಕ್ಯೂಸೆಕ್ ನೀರು ಹೊರಹರಿವು ಕಡಿಮೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಇಂದು ಸಹ ಉತ್ತಮ ಮಳೆಯಾಗುತ್ತಿರುವ ಕಾರಣ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಹೊರಹರಿವು ಸಹ ಹೆಚ್ಚಳ ಮಾಡಬಹುದಾಗಿದೆ.
![Alamatti dam water level](https://etvbharatimages.akamaized.net/etvbharat/prod-images/kn-vjp-01-alamatti-water-news-av-7202140_08082020105043_0808f_1596864043_547.jpg)
ಕಳೆದ ವರ್ಷಸ್ಥಿತಿ ಗತಿ : ಕಳೆದ ವರ್ಷದ ಜಲಾಶಯದ ಮಟ್ಟ ಹೋಲಿಸಿದ್ರೆ ಅಂದು ಪ್ರವಾಹ ಪರಿಸ್ಥಿತಿ ಜಿಲ್ಲೆಯಲ್ಲಿ ಮುನ್ಸೂಚನೆ ನೀಡಿತ್ತು. 517.26 ಮೀಟರ್ ನೀರು ಕಳೆದ ವರ್ಷ ಜಲಾಶಯದಲ್ಲಿ ಸಂಗ್ರಹಿಸಲಾಗಿತ್ತು. 3.30 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇತ್ತು. 3.90 ಲಕ್ಷ ಕ್ಯೂಸೆಕ್ ನೀರು ಹೊರ ಹರಿವು ದಾಖಲಾಗಿತ್ತು. 123.081 ಟಿಎಂಸಿ ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಕಳೆದ ವರ್ಷ ಈ ದಿನ 85.697 ಟಿಎಂಸಿ ನೀರು ಸಂಗ್ರಹವಾಗಿತ್ತು.
ಸೌಂದರ್ಯ ನೋಡಲು ಪ್ರವಾಸಿಗರೇ ಇಲ್ಲ : ಆಲಮಟ್ಟಿ ಜಲಾಶಯದಲ್ಲಿ ದಿನೇದಿನೆ ನೀರಿನ ಮಟ್ಟ ಹೆಚ್ಚಳವಾಗಿರುವ ಕಾರಣ ಜಲಾಶಯ ಬಹುತೇಕ ಭರ್ತಿಯಾಗಿದೆ. ಮೈದುಂಬಿ ಹರಿಯುತ್ತಿರುವ ಜಲಾಶಯ ನೋಡಲು ಎರಡು ಕಣ್ಣು ಸಾಲದು. ಅಂತಹ ಸೌಂದರ್ಯ ಎತ್ತ ನೋಡಿದರತ್ತ ಕಾಣುತ್ತಿದೆ. ಆದರೆ, ಕೊವಿಡ್-19 ಭಯದಿಂದ ನಲುಗಿರುವ ಜಿಲ್ಲೆಯಲ್ಲಿ ಸದ್ಯ ಪ್ರವಾಸಿ ಉದ್ಯಾನವನಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಜಲಾಶಯದ ವಿಹಂಗಮ ನೋಟ ನೋಡುವ ಭಾಗ್ಯ ಜನತೆ ಕಳೆದುಕೊಂಡಂತಾಗಿದೆ.