ಕಾರವಾರ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತೀವ್ರ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಡುಗಡೆಗಾಗಿ ಇಂದು ಪುರಾಣ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೊನ್ನಾವರ ತಾಲೂಕು ಒಕ್ಕಲಿಗರ ಸಂಘದ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಇಡಗುಂಜಿ ಗಣಪತಿ ಸನ್ನಿದಾನದಲ್ಲಿ ಗಣಹೋಮ ಮಾಡಿ, ಮಹಾಮಂಗಳಾರತಿ ಪೂಜೆ ಸಲ್ಲಿಸಿ, ಡಿ ಕೆ ಶಿವಕುಮಾರ್ ಸಂಕಷ್ಟದಿಂದ ಹೊರ ಬರಲಿ ಎಂದು ಬೇಡಿಕೊಂಡರು.
ಬಳಿಕ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣಾ ಗೌಡ, ಜಾ.ನಿ ಮತ್ತು ಐಟಿಯಿಂದ ಡಿಕೆಶಿ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಇಂತಹ ಸಂಕಷ್ಟ ಎದುರಾದಾಗ ಗಣಪತಿ ಮೊರೆ ಹೋದರೆ ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿಂದ ಮತ್ತು ಇಡಗುಂಜಿ ಗಣಪತಿ ನಿಂತಿರುವ ಬಾಲ ಗಣಪತಿ ಜೊತೆಗೆ ದ್ವಿಭುಜ ಗಣಪತಿಯಾಗಿರುವುದರಿಂದ ಇಡಗುಂಜಿ ಗಣಪತಿಗೆ ಪೂಜೆ ಸಲ್ಲಿಸಿದರೆ ಸಂಕಷ್ಟ ಶೀಘ್ರದಲ್ಲಿ ನಿವಾರಣೆಯಾಗಲಿದೆ ಎನ್ನುವ ಕಾರಣಕ್ಕೆ ವಿಶೇಷ ಪೂಜೆಯನ್ನ ಸಲ್ಲಿಸಲಾಗಿದೆ ಎಂದು ತಿಳಿದರು.