ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಜೋರಾದ ಬೆನ್ನಲ್ಲೇ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಆದರೆ ಬೀಜಗಳನ್ನು ಬಿತ್ತನೆ ಮಾಡಲು ರಸಗೊಬ್ಬರದ ಕೊರತೆ ಎದುರಾಗಿದ್ದು, ಗೊಬ್ಬರ, ಬೀಜಗಳು ಸಿಗದೇ ಉಳಿಮೆ ಮಾಡಿದ ಜಮೀನನ್ನು ಹಾಗೆಯೇ ಖಾಲಿ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರಸಗೊಬ್ಬರ ಸಿಗದೆ ಕೃಷಿ ಚಟುವಟಿಕೆ ವಿಳಂಬ: ಕೃಷಿಕರಿಗೆ ಬೀಜ ಬಿತ್ತನೆ ವೇಳೆ ಅಗತ್ಯವಾಗಿ ಬೇಕಾಗುವ ಡಿಎಪಿ ರಸಗೊಬ್ಬರ ಸಿಗದಿರುವುದರಿಂದ ಕೃಷಿ ಚಟುವಟಿಕೆಗಳು ವಿಳಂಬವಾಗತೊಡಗಿದೆ. ಕೃಷಿಕರು ರಸಗೊಬ್ಬರಗಳ ಅಧಿಕೃತ ಮಾರಾಟಗಾರರು, ಪರವಾನಿಗೆ ಪಡೆದ ಸಹಕಾರಿ ಸಂಸ್ಥೆಗಳಲ್ಲಿ ರಸಗೊಬ್ಬರಕ್ಕೆ ವಿಚಾರಿಸಿ ಬರಿಗೈಯ್ಯಲ್ಲಿ ಮರಳುತ್ತಿದ್ದಾರೆ. ರಸಗೊಬ್ಬರದ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜಗಳು ಸಿಗದೇ ರೈತರು ಕಂಗಾಲಾಗಿದ್ದಾರೆ.
ಪ್ರತಿ ವರ್ಷ ಮೇ ಮಧ್ಯಂತರದಲ್ಲಿ ರಸಗೊಬ್ಬರ ಪೂರೈಕೆಯಾಗುತ್ತಿದ್ದು, ಬಳಿಕ ಸೆಪ್ಪಂಬರ್ವರೆಗೂ ಹಂತಹಂತವಾಗಿ ಪೂರೈಕೆಯಾಗುತಿತ್ತು. ಆದರೇ ಈ ಬಾರಿ ಪೂರೈಕೆ ವಿಳಂಬವಾಗಿದೆ. ಇದರಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಬೆಳೆಯುವ ಭತ್ತ, ಜೋಳ, ಶುಂಠಿ ನಾಟಿ ಮಾಡುವ ಸಮಯದಲ್ಲಿ ಬೇಕಾದ ಡಿ.ಎ.ಪಿ ಮತ್ತು ಎನ್.ಪಿ.ಕೆ ರಸಗೊಬ್ಬರಗಳು ಸಿಗದೆ ಕೃಷಿ ಚಟುವಟಿಕೆ ವಿಳಂಬವಾಗಿದೆ. ಇನ್ನು ಕೆಲವೆಡೆ ಹದಗೊಳಿಸಿದ ಭೂಮಿಯನ್ನು ರಸಗೊಬ್ಬರ ಇಲ್ಲದ ಕಾರಣ ಅಂತೆಯೇ ಬಿಡಲಾಗಿದ್ದು, ಕೆಲವೆಡೆ ಕೃಷಿ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ನಾವು ಬಿತ್ತನೆಗೆ ಹೊರಡುವ ಕಾಲಕ್ಕೆ ನಮಗೆ ಬೇಕಾದ ರಸಗೊಬ್ಬರಗಳು ಸಿಗುತ್ತಿಲ್ಲ. ಜೊತೆಗೆ ಈ ಬಗ್ಗೆ ವಿಚಾರಿಸಲು ಹೋದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಈ ಕೂಡಲೇ ಬಿತ್ತನೆಗೆ ಬೇಕಾದ ರಸಗೊಬ್ಬರವನ್ನು ಪೂರೈಸಬೇಕೆಂದು ರೈತ ಬಸವರಾಜ್ ಈರಪ್ಪನಾಯ್ಕ ಮನವಿ ಮಾಡಿದ್ದಾರೆ.
ಈಗಾಗಲೇ ಮುಂಗಾರು ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಆರಂಭವಾಗಿದೆ. ಆದರೆ ರೈತರಿಗೆ ಬೀಜ ಬಿತ್ತನೆಗೆ ಬೇಕಾದ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳು ಹಿಂದೆ ಬಿದ್ದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ರೈತ ರಾಘವೇಂದ್ರ ನಾಯ್ಕ ಒತ್ತಾಯಿಸಿದ್ದಾರೆ.
ಬಿತ್ತನೆ ಬೀಜ ಸಿಗದೆ ರೈತರ ಪರದಾಟ: ಪ್ರತಿ ವರ್ಷ ಮುಂಗಾರು ಆರಂಭಗೊಳ್ಳುವ ಮುನ್ನ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ರಸಗೊಬ್ಬರ, ಬಿತ್ತನೆ ಬೀಜ ಎರಡು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ರೈತರು ಹೇಳಿದ್ದಾರೆ. ಇದರಿಂದ ಶಿರಸಿ, ಸಿದ್ದಾಪುರ, ಬನವಾಸಿ, ಮುಂಡಗೋಡ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತವಾಗಿದೆ. ಇನ್ನು ಕೆಲವು ರೈತರು ಹೆಚ್ಚಿನ ದರ ನೀಡಿ ಖಾಸಗಿ ಅಂಗಡಿಗಳಲ್ಲಿ ರಸಗೊಬ್ಬರ ಮತ್ತು ಬೀಜಗಳನ್ನು ಖರೀದಿ ಮಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರವಾರ ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೌಡ, ಸದ್ಯ ಬೀಜ ಬಿತ್ತನೆಗೆ ಯಾವುದೇ ಸಮಸ್ಯೆ ಇಲ್ಲ. ಜೊತೆಗೆ ಜಿಲ್ಲೆಯಲ್ಲಿ 4,750 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, 1,300 ಮೆಟ್ರಿಕ್ ಟನ್ ನ್ನು ಈಗಾಗಲೇ ಸೊಸೈಟಿಗಳಿಗೆ ಕಳುಹಿಸಲಾಗಿದೆ. ಹೆಚ್ಚಿನ ಬೇಡಿಕೆ ಇದ್ದು ಮುಂದಿನ ವಾರದೊಳಗೆ ಸೊಸೈಟಿಗಳಿಗೆ ಕಳುಹಿಸುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಕರಾವಳಿಯಲ್ಲಿ ಸ್ವಲ್ಪ ಮಳೆಯ ಸಮಸ್ಯೆ ಇರುವುದರಿಂದ ಕೃಷಿ ಕಾರ್ಯಗಳು ಸ್ವಲ್ಪ ವಿಳಂಬವಾಗುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಚಿರತೆ ದತ್ತು ಸ್ವೀಕಾರ ಮತ್ತೊಂದು ವರ್ಷಕ್ಕೆ ನವೀಕರಿಸಿದ ಕ್ರಿಕೆಟರ್ ವೇದಾ