ಕಾರವಾರ: ಸರಣಿ ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜೋಯಿಡಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಾದಿ ಗ್ರಾಮದ ಶಿವರಾಮ ದಾನಗೇರಿ ಎನ್ನುವವರ 1 ಕ್ವಿಂಟಾಲ್ 25 ಕೆಜಿ ತೂಕದ ಸುಮಾರು 60 ಸಾವಿರ ಮೌಲ್ಯದ ರಾಶಿ ಅಡಿಕೆಯನ್ನು ಫೆ. 6ರ ರಾತ್ರಿ ಕದ್ದು, ಸಿಸಿಟಿವಿಯನ್ನು ಹಾಳು ಮಾಡಿ ತೆರಳಿದ್ದರು. ಈ ಬಗ್ಗೆ ಶಿವರಾಮ ದಾನಗೇರಿ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದೇ ರೀತಿ ಕೆಲ ದಿನಗಳ ಹಿಂದೆ ಇಂತದ್ದೇ ಪ್ರಕರಣ ಬೆಡ್ಸಗದ್ದೆ ಗ್ರಾಮದಲ್ಲಿ ನಡೆದಿತ್ತು. ಸರಣಿ ಅಡಿಕೆ ಕಳ್ಳತನದ ಸುದ್ದಿ ಕೇಳಿ ಗ್ರಾಮಸ್ಥರು ಕಂಗಾಲಾಗಿದ್ದರು. ಅಲ್ಲದೆ ಕೆಲ ಅಡಿಕೆ ಮಾಲೀಕರು ಅಡಿಕೆ ಇರುವ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಿದರೆ, ಇನ್ನು ಕೆಲವರು ರಾತ್ರಿಯಿಡೀ ಅಡಿಕೆ ಕಾಯುವಂತಾಯಿತು. ಆದರೆ ಪ್ರಕರಣ ದಾಖಲಿಸಿಕೊಂಡ ಜೋಯಿಡಾ ಪೊಲೀಸರ ತಂಡ ತ್ವರಿತಗತಿಯಲ್ಲಿ ಸರಣಿ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಗಿದೆ.
ಓದಿ: ಅಮೆರಿಕದಲ್ಲಿನ ಉದ್ಯೋಗ ನಂಬಿ ಮೋಸ ಹೋದ ಉತ್ತರಕನ್ನಡ ಯುವತಿ: ಕಳೆದುಕೊಂಡಿದ್ದು ಅರ್ಧ ಕೋಟಿ!
ಬಂಧಿತರನ್ನು ಗುಂದ ಮೂಲದ ಅಲ್ಬನ್ ಬೆಜ್ಮಿ ಗೋಮ್ಸ (30), ದಾವುಲಸಾಬ ದೊಡ್ಮನಿ (42), ರಾಜಾಸಾಬ ದೊಡ್ಮನಿ (32) ಎಂದು ಗುರುತಿಸಲಾಗಿದೆ. ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಡಿವೈಎಸ್ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ ಜೋಯಿಡಾ ಸಿಪಿಐ ಬಾಬಾಸಾಹೇಬ ಹುಲ್ಲಣ್ಣನವರ ನೇತೃತ್ವದಲ್ಲಿ ಪಿಎಸ್ಐ ಲಕ್ಷ್ಮಣ ಪೂಜಾರ, ಎಎಸ್ಐ ಪ್ರಶಾಂತ ಸಾವಂತ, ದಯಾನಂದ ಜೋಗಳೆಕರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.