ಕಾರವಾರ: ಕರಾವಳಿ ಅಂದ್ರೆ ಸಾಮಾನ್ಯವಾಗಿ ಅತೀ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾಗುತ್ತದೆ. ಅದರಲ್ಲೂ ನೌಕಾನೆಲೆ, ಅಣುವಿದ್ಯುತ್ ಸ್ಥಾವರವನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸಮುದ್ರ ಮಾರ್ಗದಲ್ಲಿ ನುಸುಳುಕೋರರು ನುಸುಳುವ ಸಾಧ್ಯತೆಗಳಿರುವುದರಿಂದ ಬಿಗಿ ಭದ್ರತೆ ಕೂಡ ಅಷ್ಟೆ ಅವಶ್ಯವಾಗಿರುತ್ತದೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಭದ್ರತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಮತ್ತು ತುರ್ತು ಸಂದರ್ಭಗಳನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎನ್ನುವುದನ್ನು ಅಭ್ಯಾಸ ಮಾಡಲು ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಎರಡು ದಿನದ ಸಾಗರ ಕವಚ ಅಣಕು ಕಾರ್ಯಾಚರಣೆ ನಡೆಯುತ್ತಿದ್ದು ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಜಿಲ್ಲೆಯ ಕರಾವಳಿ ಭಾಗದ ಭದ್ರತೆ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ತಟರಕ್ಷಕ ದಳ ಹಾಗೂ ಭಾರತೀಯ ನೌಕಾಸೇನೆ ವತಿಯಿಂದ ಸಾಗರ ಕವಚ ಅಣುಕು ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಚೆಕ್ಪೊಸ್ಟ್ಗಳನ್ನು ನಿರ್ಮಿಸಿ ವಾಹನಗಳಲ್ಲಿ ಬರುವ ಶಂಕಿತರನ್ನು ಹಿಡಿಯುವುದು ಈ ಕಾರ್ಯಾಚರಣೆ ಪ್ರಮುಖ ಉದ್ದೇಶ. ಈ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧೆಡೆ ಚೆಕ್ಪೋಸ್ಟ್ಗಳನ್ನ ನಿರ್ಮಿಸಿ ಜಿಲ್ಲೆಯ ಒಳಗೆ ಹಾಗೂ ಹೊರಗೆ ಹೋಗುವ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತದೆ.
ಈ ವೇಳೆ ನಕಲಿ ಉಗ್ರರು ಪೊಲೀಸರ ಕಣ್ತಪ್ಪಿಸಿ ಜಿಲ್ಲೆಯ ಒಳಪ್ರವೇಶಿಸದಂತೆ ತಡೆಯುವುದು ಭದ್ರತಾ ಸಿಬ್ಬಂದಿ ಕಾರ್ಯವಾಗಿದ್ದು ಭದ್ರತಾ ಸಿಬ್ಬಂದಿಯೇ ನಕಲಿ ಉಗ್ರರ ವೇಷದಲ್ಲಿ ಜಿಲ್ಲೆಯನ್ನು ಪ್ರವೇಶಿಸುವ ಪ್ರಯತ್ನ ನಡೆಸುತ್ತಾರೆ. ಈ ಮೂಲಕ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು.
ಇನ್ನು ಸಾಗರಕವಚ ಅಣಕು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಧಾರ್ಮಿಕ ಸ್ಥಳಗಳು ಸೇರಿದಂತೆ ಮಾರುಕಟ್ಟೆಯಂತಹ ಸ್ಥಳಗಳಲ್ಲಿ ಪೊಲೀಸರ ತಂಡಗಳು ತಪಾಸಣೆ ಕಾರ್ಯವನ್ನು ನಡೆಸುತ್ತಿವೆ. ಹೆದ್ದಾರಿಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸುವುದರ ಜೊತೆಗೆ ಕಡಲತೀರಗಳಲ್ಲಿ ಕರಾವಳಿ ಕಾವಲು ಪಡೆ ಸಿಬ್ಬಂದಿ ಗಸ್ತು ತಿರುಗುವ ಮೂಲಕ ನುಸುಳುಕೋರರ ಮೇಲೆ ಹದ್ದಿನಕಣ್ಣು ಇರಿಸಿದೆ.
ಜಿಲ್ಲೆಯಲ್ಲಿ ಭದ್ರತೆ ಪರಿಶೀಲಿಸುವ ನಿಟ್ಟಿನಲ್ಲಿ ಕೈಗೊಂಡ ಸಾಗರ ಕವಚ ಅಣಕು ಕಾರ್ಯಾಚರಣೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಉತ್ಪಾದನಾ ಘಟಕಗಳಿದ್ದು ಅತಿ ಸೂಕ್ಷ್ಮ ಪ್ರದೇಶ ಎನಿಸಿಕೊಂಡಿದೆ. ಅಲ್ಲದೇ ಸಮುದ್ರ ಮಾರ್ಗದ ಮೂಲಕವೂ ಆಗಂತುಕರು ಒಳನುಸುಳುವ ಸಾಧ್ಯತೆಗಳಿದ್ದು ಎಲ್ಲ ಸಂದರ್ಭದಲ್ಲೂ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ ತುರ್ತು ಸಂದರ್ಭಗಳಲ್ಲಿ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅನುಕೂಲವಾಗಿದೆ ಅಂತಾರೆ ಸ್ಥಳೀಯರಾದ ನಾಗರಾಜ ಹರಪ್ಪನಹಳ್ಳಿ.
ಒಟ್ಟಾರೆ ಜಿಲ್ಲೆಯಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ ಮೂಲಕ ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ತಟರಕ್ಷಕ ದಳ ಹಾಗೂ ಭಾರತೀಯ ನೌಕಾಸೇನೆ ಭದ್ರತೆಯ ಕುರಿತು ಸಾರ್ವಜನಿಕರಿಗೆ ಭರವಸೆ ಮೂಡಿಸಿದ್ದು ಭದ್ರತಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.