ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡದ ಕರಾವಳಿಯಲ್ಲಿ ಮಳೆ ಜೋರಾದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಿಸುವ ಪ್ರಯಾಣಿಕರಿಗೆ ಆತಂಕ ಶುರುವಾಗಿದೆ. ಅರೆಬರೆ ಮತ್ತು ಅವೈಜ್ಞಾನಿಕ ಕಾಮಗಾರಿ ಕೈಗೊಂಡಿರುವ ಪರಿಣಾಮ, ಸದ್ಯ ಮಳೆ ಸುರಿಯುತ್ತಿದ್ದಂತೆ ಅಲ್ಲಲ್ಲಿ ಗುಡ್ಡಗಳಿಂದ ಬಂಡೆಗಲ್ಲುಗಳ ಹೆದ್ದಾರಿಯಲ್ಲಿ ಊರುಳಿ ಬೀಳುತ್ತಿವೆ. ಮತ್ತೆ ಕೆಲವು ಕಡೆಗಳಲ್ಲಿ ಗುಡ್ಡಗಳು ಬಾಯ್ತೆರೆದು ನಿಂತಂತೆ ಕಾಣಿಸುತ್ತಿವೆ. ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಪ್ರಾಣ ಭೀತಿ ಕಾಡತೊಡಗಿದೆ.
ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾರ್ಯ ಆರಂಭವಾಗಿ ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ, ಇನ್ನೂ ಸಹ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಅಲ್ಲದೇ, ಕಾಮಗಾರಿಗಾಗಿ ಅಲ್ಲಲ್ಲಿ ಗುಡ್ಡಗಳನ್ನು ಕೊರೆದು ಹಾಗೆಯೇ ಬಿಡಲಾಗಿದೆ. ಈ ಗುಡ್ಡಗಳಿಂದ ಬೇಸಿಗೆಯಲ್ಲಿ ಅಷ್ಟೇನೂ ಆತಂಕ ಇಲ್ಲವಾದರೂ ಇದೀಗ ಮಳೆಗಾಲದಲ್ಲಿ ಅಲ್ಲಲ್ಲಿ ಕುಸಿತವಾಗುತ್ತಿರುವುದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಪ್ರತಿಭಟನೆಯ ಎಚ್ಚರಿಕೆ: ಕರಾವಳಿ ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಅಪಾಯಕಾರಿ ರೀತಿಯಲ್ಲಿ ಕೊರೆದಿರುವ ಗುಡ್ಡಗಳಿಂದ ಮಣ್ಣು ಹಾಗೂ ಬಂಡೆಗಳು ಹೆದ್ದಾರಿಗೆ ಉರುಳಿ ಬೀಳುತ್ತಿವೆ. ಈ ವಾರದಲ್ಲಿಯೇ ಮೂರು ಕಡೆ ಬಂಡೆಗಳು ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ಜೋರಾದ ವೇಳೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಂಬಂಧಪಟ್ಟ ಕಂಪನಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುವುದಾಗಿ ಹೋರಾಟಗಾರ ಮಂಜುನಾಥ ಗೌಡ ಎಚ್ಚರಿಕೆ ನೀಡಿದರು.
ಪ್ರತಿವರ್ಷ ಮಳೆಗಾಲದ ಅವಧಿಯಲ್ಲಿ ಹೆದ್ದಾರಿಯ ಅಲ್ಲಲ್ಲಿ ಅಗಲೀಕರಣಕ್ಕಾಗಿ ಕೊರೆದ ಗುಡ್ಡಗಳಿಂದ ಕಲ್ಲು, ಮಣ್ಣು ಕುಸಿದುಬಿದ್ದು ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಇಷ್ಟಾದರೂ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಐಆರ್ಬಿ ಕಂಪನಿ ಮುಂದಾಗಿಲ್ಲ. ಕೆಲವೆಡೆ ಅಪಾಯಕಾರಿ ರೀತಿಯಲ್ಲಿ ಗುಡ್ಡಗಳನ್ನು ಕೊರೆದು ಬಿಡಲಾಗಿದ್ದು, ಇದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ ಮಾತನಾಡಿ, ''ಕಳೆದ ಒಂದು ವಾರದಿಂದ ಕರಾವಳಿಯಾದ್ಯಂತ ಮಳೆಯಾಗುತ್ತಿರುವ ಕಾರಣ ಹೆದ್ದಾರಿ ಕಾಮಗಾರಿಗೆ ಗುಡ್ಡ ತೆರವುಗೊಳಿಸಿದ ಪ್ರದೇಶದಲ್ಲಿ ಮಣ್ಣು ಕುಸಿಯುತ್ತಿದೆ. ಬಿಣಗಾದಲ್ಲಿ ಹೆದ್ದಾರಿಗೆ ಬಂಡೆಗಲ್ಲು ಉರುಳಿದ ಕಾರಣ ಸದ್ಯ ಒಂದು ಭಾಗದಲ್ಲಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ತಂಡ್ರಕುಳಿ ಬಳಿಯೂ ಬಂಡೆಗಲ್ಲು ಉರುಳಿದ ಪ್ರದೇಶಕ್ಕೆ ಎಸಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಗತ್ಯಬಿದ್ದಲ್ಲಿ ಈ ಪ್ರದೇಶಗಳ ಪಕ್ಕದಲ್ಲಿರುವ ಜನರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಈ ಬಗ್ಗೆ ಅವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಐಆರ್ಬಿ ಅಧಿಕಾರಿಗಳಿಗೂ ಅಗತ್ಯ ಕ್ರಮವಹಿವಂತೆ ಸೂಚನೆ ನೀಡಲಾಗಿದೆ. ಸ್ಥಳಾಂತರಕ್ಕೆ ಅಧಿಕಾರಿಗಳು ಸೂಚಿಸಿದ್ದಲ್ಲಿ ಜನರು ಕೂಡ ಸ್ಪಂದನೆ ನೀಡಬೇಕು'' ಎಂದು ತಿಳಿಸಿದರು.
ಹೆದ್ದಾರಿ ಅಗಲೀಕರಣದ ಅವೈಜ್ಞಾನಿಕ ಕಾಮಾಗಾರಿಯಿಂದ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಇಲ್ಲಿದೆ. ಗುಡ್ಡ ಕುಸಿತದಿಂದ ಕಾರಣ ದೊಡ್ಡ ಅವಾಂತರಗಳು ನಡೆಯುವ ಮುನ್ನವೇ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯ.
ಇದನ್ನೂ ಓದಿ: Heavy rain: ಮುಂಬೈ ಮತ್ತು ಥಾಣೆಯಲ್ಲಿ ಧಾರಾಕಾರ ಮಳೆ, ಮರ ಬಿದ್ದು ಓರ್ವ ಸಾವು