ಶಿರಸಿ : ನಗರದ ವ್ಯಕ್ತಿಯೊಬ್ಬ ರಾಜಸ್ಥಾನದಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಮಹಾರಾಷ್ಟ್ರದ ಪುಣೆ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಯಾಸರ್ ನವಾಜ್ ಕಾಗಲಕರ್ ಬಂಧಿತ ಆರೋಪಿ. ಈತ ರಾಜಸ್ಥಾನದ ವ್ಯಕ್ತಿಯೋರ್ವನಿಗೆ ಉತ್ತಮವಾದ ನಿವೇಶನ ಕೊಡಿಸುವುದಾಗಿ ಹೇಳಿ ಆತನಿಂದ 13 ಲಕ್ಷ ರೂ. ಪಡೆದು, ನಿವೇಶವನವನ್ನೂ ನೀಡದೇ ಹಣವನ್ನೂ ಕೊಡದೇ ವಂಚಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದು ಈ ಕುರಿತು ರಾಜಸ್ಥಾನದ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ರಾಜಸ್ಥಾನದ ಪೊಲೀಸರು, ಯಾಸರ್ ಪುಣೆಯ ತಾಜ್ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಯಾಸರ್ ವಿರುದ್ಧ ಶಿರಸಿ ಸೇರಿದಂತೆ ರಾಜ್ಯದ ಹಲವೆಡೆ ಹಾಗೂ ಹೊರ ರಾಜ್ಯದಲ್ಲೂ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಶಿರಸಿಯಲ್ಲಿಯೂ ತನಿಖೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.