ಭಟ್ಕಳ: ಪಟ್ಟಣವು ಕೊರೊನಾ ಮಹಾಮಾರಿ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಳ್ಳುತ್ತಿರುವಂತೆ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ.
ಇಲ್ಲಿನ ಜನತೆ ಲಾಕ್ಡೌನ್ ಸರಿಯಾಗಿ ಪಾಲಿಸುತ್ತಿಲ್ಲ. ಮೊದಮೊದಲು ಪೊಲೀಸರು ಲಾಠಿ ಹಿಡಿದು ಜನರ ನಿಯಂತ್ರಣ ಮಾಡಿದ್ದರು. ನಂತರ ಅಧಿಕಾರಿಗಳ ಸೂಚನೆಯಂತೆ ಲಾಠಿ ಪ್ರಹಾರ ಕಡಿಮೆ ಮಾಡಲಾಗಿತ್ತು. ಇದನ್ನೇ ವರದಾನವಾಗಿ ಪರಿಗಣಿಸಿದ ಜನರು, ಇದರ ಲಾಭವನ್ನು ಪಡೆಯಲು ಮತ್ತೆ ರೋಡಿಗಿಳಿದಿದ್ದರು. ಭಟ್ಕಳ ಉಪ ವಿಭಾಗಾಧಿಕಾರಿ, ತಹಶಿಲ್ದಾರ್, ಡಿವೈಎಸ್ಪಿ ಅನಾವಶ್ಯಕವಾಗಿ ತಿರುಗಾಡುವವರ ವಾಹನಗಳನ್ನು ವಶಕ್ಕೆ ಪಡೆದರೂ ಸಹ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾದ್ಯವಾಗಿರಲಿಲ್ಲ.

ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಮುಂದಿನ ದಿನಗಳಲ್ಲಿ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ಎಚ್ಚರಿಕೆ ನೀಡಿ ಮಾರ್ಚ್ ಫಾಸ್ಟ್ ನಡೆಸಿದೆ. ಹಳೇ ಬಸ್ ನಿಲ್ದಾಣ, ಸುಲ್ತಾನ ಸ್ಟ್ರೀಟ್, ಚಿನ್ನದ ಪಳ್ಳಿ, ರಥ ಬೀದಿ, ಸರ್ಕಲ್ ಮುಖಾಂತರ ಶಿರಾಲಿ, ಜಾಲಿ, ಗಾಂಧಿನಗರ, ಹೆಬಳೆಯಿಂದ ಶಿರಾಲಿ ಮಾವಿನಕಟ್ಟೆಗೆ ತೆರಳಿ ಜಾಗೃತಿಯ ಸಂದೇಶ ನೀಡಿದ್ದಾರೆ.