ಕಾರವಾರ/ಶಿರಸಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಕುಮಟಾ ಹಾಗೂ ಅಂಕೋಲಾದಲ್ಲಿ ಎರಡು ತೂಗು ಸೇತುವೆಗಳು ಕೊಚಿಹೋಗಿದ್ದು, ಶಿರಸಿ ತಾಲೂಕಿನ ಪೂರ್ವ ಭಾಗದ ಜೀವನದಿ ವರದೆ ಉಕ್ಕಿ 1500 ಕ್ಕೂ ಅಧಿಕ ಭತ್ತದ ಗದ್ದೆಗಳು ಜಲಾವೃತಗೊಂಡು, ಅಕ್ಕಪಕ್ಕದ ಗ್ರಾಮಗಳಿಗೆ ನೆರೆಯ ಭೀತಿ ಎದುರಾಗಿದೆ.
ಕಳೆದ ಒಂದುವಾರದಿಂದ ಮಳೆ ಎಡೆ ಬಿಡದೆ ಸುರಿಯುತ್ತಿರುವ ಕಾರಣ ಬಹುತೇಕ ನದಿಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಅಘನಾಶಿನಿ ನದಿಯಲ್ಲಿ ಇದೇ ಮೋದಲ ಬಾರಿಗೆ ನೀರು ಅತೀ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿದೆ. ಸೋಪಿನ ಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಮನೆಯಿಂದ ಬಗಣೆ ಹಾಗೂ ಮೊರಸೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಳೆದ ನಾಲ್ಕೈದು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಇದೀಗ ಸೇತುವೆ ಮೇಲೆ ನೀರು ಹರಿದಿದ್ದು, ನದಿಯಲ್ಲಿ ತೇಲಿ ಬಂದ ಬೃಹತ್ ಗಾತ್ರದ ದಿಮ್ಮಿಗಳು ಸಿಕ್ಕಿ ಸೇತುವೆ ತುಂಡಾಗಿ ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದ ಗ್ರಾಮಕ್ಕೆ ಸಂಪರ್ಕವೇ ಇಲ್ಲದಂತಾಗಿದೆ.
ಬನವಾಸಿಯ ಅಜ್ಜರಣಿ, ಮೊಗಳ್ಳಿ, ಹೊಸಕೊಪ್ಪ, ಬಾಶಿ, ನೂರೂರು, ಮತ್ತಗುಣಿ ಊರುಗಳು ಜಲಾವೃತವಾಗಿದೆ. ಅಜ್ಜರಣಿ ಸೇತುವೆ ಮುಳಗಿ ಅಜ್ಜರಣಿ ಗ್ರಾಮಸ್ಥರು ನಗರಕ್ಕೆ ಬರಲು ಪರದಾಡುವಂತಾಗಿದೆ. ಸ್ಥಳಕ್ಕೆ ಶಿರಸಿ ಉಪ ವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಿದರು.
ಮಳೆ ವರದಿ :
ಮಂಗಳವಾರ ಬೆಳಗ್ಗೆ 6 ಗಂಟೆಯವರೆಗೆ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಸಿದ್ದಾಪುರದಲ್ಲಿ 282 ಮಿ.ಮೀ. ಮಳೆಯಾಗಿದೆ. ಶಿರಸಿ ತಾಲೂಕಿನಲ್ಲಿ 175 ಮೀ.ಮೀ, ಯಲ್ಲಾಪುರದಲ್ಲಿ 242 ಮಿ.ಮೀ. ಹಾಗೂ ಮುಂಡಗೋಡಿನಲ್ಲಿ 101 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಈವರೆಗೆ ಕ್ರಮವಾಗಿ 2187 ಮಿ.ಮೀ., 1911 ಮಿ.ಮೀ,1871 ಮಿ.ಮೀ. ಹಾಗೂ 744.5 ಮಿ.ಮೀ. ಮಳೆ ದಾಖಲಾಗಿದ್ದು, ವರ್ಷ ಮುಗಿಯಲು ನಾಲ್ಕು ತಿಂಗಳು ಇರುವಾಗಲೇ ವಾಡಿಕೆ ಮಳೆ ಸಮೀಪ ತಲುಪಿದೆ.