ಭಟ್ಕಳ: ಪಟ್ಟಣದ ರಾಜಾಂಗಣದ ಬಳಿಯ ನಾಗಬನದ ಕಾಂಪೌಂಡ್ ನಿರ್ಮಾಣ ಕಾರ್ಯದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಭಟ್ಕಳ ಉಪವಿಭಾಗಾಧಿಕಾರಿಗಳು ಸೂಚಿಸಿದರೂ ಕಿಡಿಗೇಡಿಗಳು ಕಾಂಪೌಂಡ್ ನಿರ್ಮಿಸಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಎಸ್.ರವಿಚಂದ್ರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೂಸಗಡಿ ಗ್ರಾಮದ ಸರ್ವೇ ನಂಬರ್ 524ಬ/4ಬ ನೇದರ ಕ್ಷೇತ್ರದಲ್ಲಿ 3 ಗುಂಟೆ 4 ಆಣೆ ರಾಜಾಂಗಣ ನಾಗರಬನ ಜಾಗದಲ್ಲಿ ನಾಗಬನದ ಸುರಕ್ಷತೆಗೆ ಸಂಬಂಧಿಸಿದಂತೆ ಶುಕ್ರವಾರ ಕಾರವಾರದ ನಿರ್ಮಿತಿ ಕೇಂದ್ರದವರು ಕಾಮಗಾರಿ ಪ್ರಾರಂಭಿಸಿದಾಗ ಕೆಲವರು ಕಾಮಗಾರಿ ನಡೆಸದಂತೆ ಅಡ್ಡಿಪಡಿಸಿದರು.
ಶಾಂತಿ ಸುವ್ಯವಸ್ಥೆ ಹಾಳುಮಾಡಲು ಪ್ರಯತ್ನಿಸಿದ ಕಾರಣ ಪಟ್ಟಣದಲ್ಲಿ ಶನಿವಾರ ನಿಷೇಧಾಜ್ಞೆ ಜಾರಿ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಅಂದಾಜು 100 ರಿಂದ 150 ಜನ ಅನ್ಯ ಕೋಮಿನ ಜನರು ಬಂದು ಕಾಮಗಾರಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿಗಳು ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿ ಕಛೇರಿಗೆ ಹೋಗಿದ್ದಾರೆ. ಇದ್ರ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ನಿಷೇಧಾಜ್ಞೆ ಉಲ್ಲಂಘಿಸಿ ಕಾಂಪೌಂಡ್ ಕಾರ್ಯ ಪೂರ್ಣಗೊಳಿಸಿದ್ದಾರೆ ಎಂದು ಭಟ್ಕಳ ತಹಶೀಲ್ದಾರ್ ರವಿಚಂದ್ರ ನಗರ ಪೊಲೀಸ್ ಠಾಣೆಯಲ್ಲಿ ರವಿವಾರ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಪೊಲೀಸ್ ಬಂದೋಬಸ್ತ್ನಲ್ಲಿ ನಾಗಬನಕ್ಕೆ ಕಾಂಪೌಂಡ್ ನಿರ್ಮಾಣ
ದೂರಿನಲ್ಲಿ ಯಾವುದೇ ವ್ಯಕ್ತಿಯ ಹೆಸರು ದಾಖಲಿಸಿಲ್ಲ. ಆದರೆ ತಹಶೀಲ್ದಾರ್ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸೋಮವಾರ ನಾಗಬನ ಕಾಂಪೌಂಡ್ಗೆ ಗೇಟ್ ಹಾಗೂ ಮತ್ತಿತರ ಸಲಕರಣೆಗಳನ್ನು ಅಳವಡಿಸಲು ತೆರಳಿದವರಿಗೆ ಅವಕಾಶ ನಿರಾಕರಿಸಲಾಗಿದೆ. ಆಡಳಿತ ಪಕ್ಷದ ಶಾಸಕರೇ ಬಂದು ಮನವಿ ಮಾಡಿದರೂ ಶಾಸಕರ ಮಾತಿಗೂ ಕಿಮ್ಮತ್ತು ನೀಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾಗಬನ ಕಾಂಪೌಂಡ್ ನಿರ್ಮಾಣ ವಿವಾದ: ಸಭೆಯಿಂದ ಹೊರನಡೆದ ಮುಖಂಡರು